ತಿರುವನಂತಪುರಂ: ಪ್ರತಿನಿತ್ಯ ದೇಶದಲ್ಲಿನ ಅರ್ಧದಷ್ಟು ಕೋವಿಡ್ –19 ಸೋಂಕಿನ ಪ್ರಕರಣಗಳು ದಾಖಲಾಗುತ್ತಿರುವ ಕೇರಳದಲ್ಲಿ ಕೋವಿಡ್ ನಿರ್ವಹಣೆ ಕುರಿತು ಪರಿಶೀಲಿಸಲು, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ನೇತೃತ್ವದ ತಂಡ ಸೋಮವಾರ ಅಲ್ಲಿಗೆ ಭೇಟಿ ನೀಡಿದೆ.
ಅಲ್ಲಿ ಭಾನುವಾರ18,582 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದು ದೇಶದಲ್ಲಿ ದಾಖಲಾದ 32,937 ಕೋವಿಡ್ ಪ್ರಕರಣಗಳ ಅರ್ಧದಷ್ಟಿದೆ. ಸಚಿವರ ಮತ್ತು ಅಧಿಕಾರಿಗಳು ತಂಡ ಕೇರಳಕ್ಕೆ ಭೇಟಿ ನೀಡಿರುವುದನ್ನು ಇಲ್ಲಿನ ವಿಮಾನ ನಿಲ್ದಾಣದ ಅಧಿಕಾರಿ ಖಚಿಪಡಿಸಿದ್ದಾರೆ.
ಈ ತಂಡದ ಪ್ರವಾಸ ವೇಳಾಪಟ್ಟಿ ಪ್ರಕಾರ, ಸಚಿವ ಮಾಂಡವಿಯ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮತ್ತು ಕೋವಿಡ್ ನಿರ್ವಹಣೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ. ನಂತರ, ಸಚಿವರ ತಂಡ, ಹಿಂದೂಸ್ತಾನ್ ಲ್ಯಾಟೆಕ್ಸ್ಗೆ (ಏಚ್ಎಲ್ಎಲ್) ಭೇಟಿ ನೀಡಲಿದೆ. ಸಂಜೆ ದೆಹಲಿಗೆ ವಾಪಾಸಾಗುವ ಮುನ್ನ, ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದೆ ಎಂದು ಮೂಲಗಳು ತಿಳಿಸಿವೆ.
ಮಾಂಡವಿಯ ಅವರೊಂದಿಗೆ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಮತ್ತು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.