ನವದೆಹಲಿ:ಈರುಳ್ಳಿ ಬೆಲೆ ಏರಿಕೆಬಗ್ಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ, 'ನಾನು ಸಸ್ಯಾಹಾರಿಯಾಗಿದ್ದು, ಈರುಳ್ಳಿ ಬೆಲೆ ಹೆಚ್ಚಳದ ಬಗ್ಗೆ ನನಗೆ ಹೇಗೆ ತಿಳಿಯಬೇಕು?‘ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ನಿನ್ನೆ ನಡೆದ ಸಂಸತ್ ಅಧಿವೇಶನದಲ್ಲಿ ಈರುಳ್ಳಿ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಹೆಚ್ಚು ಈರುಳ್ಳಿ ಬಳಸುವ ಕುಟುಂಬದಿಂದ ನಾನು ಬಂದವಳಲ್ಲ‘ ಎನ್ನುವ ಮೂಲಕ ಸದನವನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದ್ದರು.
ಈ ವಿಚಾರದ ಬಗ್ಗೆ ಎಎನ್ಐ ಜೊತೆ ಮಾತನಾಡಿರುವ ಮತ್ತೊಬ್ಬ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ನಿರ್ಮಲಾ ಸೀತಾರಾಮನ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈರುಳ್ಳಿ ಬೆಲೆ ಏರಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ನಗುತ್ತಲೇ ಪ್ರತಿಕ್ರಿಯಿಸಿದ ಅವರು, ‘ನಾನು ಸಸ್ಯಾಹಾರಿ. ಇಲ್ಲಿಯವರೆಗೂ ಈರುಳ್ಳಿ ರುಚಿಯನ್ನೇ ನೋಡಿಲ್ಲ. ಈರುಳ್ಳಿಯ ಮಾರುಕಟ್ಟೆ ಬೆಲೆ ಬಗ್ಗೆ ನನಗೆ ಹೇಗೆ ಗೊತ್ತಾಗಬೇಕು?’ ಎಂದಿದ್ದಾರೆ.
ಈ ನಡುವೆ ಈರುಳ್ಳಿ ಬೆಲೆಯು 100 ರಿಂದ 120 ರು. ತಲುಪಿದ್ದು, ಸಾಮಾನ್ಯ ಜನರ ಆಕ್ರೋಶಕ್ಕೆ ಗುರಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.