ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್
ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಎಎಪಿ ಸರ್ಕಾರವು ನಮ್ಮ ಬೆಂಬಲಿಗರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದೆ ಎಂದು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ನಮ್ಮ ಬೆಂಬಲಿಗರ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸುವಂತೆ ಕೋರಿ ಮಾನ್ ಅವರ ಅಧಿಕೃತ ನಿವಾಸಕ್ಕೆ ಹೋಗಿದ್ದೆ. ಆದರೆ, ಅವರು ಮಾತುಕತೆಗೆ ಅವಕಾಶ ನೀಡದೆ ಪಲಾಯನ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಎಲ್ಲರಿಗೂ ನನ್ನ ಕಚೇರಿ ಬಾಗಿಲುಗಳು ಸದಾ ತೆರೆದಿರುತ್ತವೆ ಎಂದು ಸಿಎಂ ಮಾನ್ ಹೇಳುತ್ತಿದ್ದರು. ಹಾಗಾದರೆ ಇಂದು ಬಾಗಿಲು ಏಕೆ ಮುಚ್ಚಿದ್ದಾರೆ. ಹೆದರಿಕೆಯಿಂದಲೇ ನನ್ನನ್ನು ಭೇಟಿಯಾಗದೆ ನುಣುಚಿಕೊಳ್ಳುತ್ತಿದ್ದಾರೆ’ ಎಂದು ಬಿಟ್ಟು ದೂರಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ನನ್ನ ಆಪ್ತ ಸಹಾಯಕ ರಾಜೀವ್ ರಾಜಾ ಮತ್ತು ಪಟಿಯಾಲ ಮೂಲದ ರಾಜೀವ್ ಅತ್ರಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಬಿಟ್ಟು ಆರೋಪಿಸಿದ್ದಾರೆ.
‘ಒಬ್ಬ ವ್ಯಕ್ತಿ ಬಲಹೀನನಾಗಿದ್ದರೆ ಹೇಗೆ ಮಾತನಾಡುತ್ತಾನೆ. ಆತ ಸತ್ಯವಂತನಾಗಿದ್ದರೆ ನನ್ನೊಂದಿಗೆ ಮಾತನಾಡಬೇಕು. ಯಾರಾದರೂ ಮುಖ್ಯಮಂತ್ರಿ ಅಡಗಿಕೊಂಡಿರುವುದನ್ನು ನೋಡಿದ್ದೀರಾ’ ಎಂದು ಬಿಟ್ಟು ಪ್ರಶ್ನಿಸಿದ್ದಾರೆ.
ರವನೀತ್ ಸಿಂಗ್ ಬಿಟ್ಟು ಅವರ ಭದ್ರತಾ ಸಿಬ್ಬಂದಿ ಮತ್ತು ಚಂಡೀಗಢ ಪೊಲೀಸರ ನಡುವೆ ತೀವ್ರ ವಾಗ್ವಾದವೂ ನಡೆಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.