ಲಖನೌ: ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ವ್ಯಕ್ತವಾಗುತ್ತಿರುವ ತೀವ್ರ ವಿರೋಧವನ್ನು ಲೆಕ್ಕಿಸದೇ ಉತ್ತರ ಪ್ರದೇಶ ಸರ್ಕಾರ, ಸಿಎಎ ಜಾರಿಗೆ ಮುಂದಾಗಿದೆ. ರಾಜ್ಯದಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಇಲ್ಲಿಯವರೆಗೆ ಒಟ್ಟು 20 ಮಂದಿ ಮೃತಪಟ್ಟಿದ್ದಾರೆ.
ತಮ್ಮ ಜಿಲ್ಲೆಯಲ್ಲಿ ವಾಸವಿರುವ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಗಾನಿಸ್ತಾನದ ನಿರಾಶ್ರಿತರನ್ನು ಗುರುತಿಸಲು ಗೃಹ ಇಲಾಖೆಯು ಜಿಲ್ಲಾಧಿಕಾರಿಗಳಿಗೆ ಮೌಖಿಕ ನಿರ್ದೇಶನ ನೀಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಮೂರು ದೇಶಗಳಿಂದ ಕಿರುಕುಳಕ್ಕೊಳಗಾಗಿ ಭಾರತಕ್ಕೆ ಬಂದ ಅಲ್ಪಸಂಖ್ಯಾತರ ಹೆಸರುಳ್ಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳು ಸಿದ್ಧಪಡಿಸಲಿದ್ದಾರೆ. ರಾಮ್ಪುರ, ಗಾಜಿಯಾಬಾದ್, ಶಹಜಾನ್ಪುರ, ಲಖನೌ ಮುಂತಾದ ಜಿಲ್ಲೆಗಳಲ್ಲಿ ಇರುವ ವಲಸಿಗರಲ್ಲಿ ಸಿಎಎ ಅಡಿ ಭಾರತದ ಪೌರತ್ವ ಪಡೆದುಕೊಳ್ಳುವರೇ ಹೆಚ್ಚಿದ್ದಾರೆ ಎಂದು ಸರ್ಕಾರ ನಿರೀಕ್ಷಿಸಿದೆ.
ಸಿದ್ಧಪಡಿಸಿದ ಪಟ್ಟಿಯನ್ನು ಕೇಂದ್ರ ಗೃಹ ಇಲಾಖೆಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.ಇದರ ಜತೆ, ‘ಅಕ್ರಮವಾಗಿ ನೆಲೆಸಿರುವ ಮುಸ್ಲಿಂ ವಲಸಿಗರ’ ಬಗ್ಗೆಯೂ ಕೇಂದ್ರಕ್ಕೆ ಮಾಹಿತಿ ನೀಡಲಾಗುವುದು. ಇವರುಗಳನ್ನು ಅವರ ಮೂಲ ದೇಶಗಳಿಗೇ ಕಳುಹಿಸುವ ದೃಷ್ಟಿಯಿಂದ ಈ ಮಾಹಿತಿ ನೀಡಲಾಗುವುದು ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.