ಲಖನೌ: ಸಮಾಜವಾದಿ ಪಕ್ಷದ ಕೆಂಪು ಟೋಪಿಗಳಲ್ಲಿ ಅಯೋಧ್ಯೆಯಲ್ಲಿ ಗುಂಡಿಕ್ಕಿ ಕೊಂದ ಕರಸೇವಕರ ಮತ್ತು ಮುಜಾಫರ್ನಗರ ಗಲಭೆ ಸಂತ್ರಸ್ತರ ರಕ್ತ ಅಡಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಕೆಂಪು ಟೋಪಿಗಳನ್ನು ಭಾರಿ ಪ್ರಮಾಣದಲ್ಲಿ ಹಂಚುತ್ತಿದ್ದಾರೆ. ಇದು ಕಾಂತ್ರಿಯ ಸಂಕೇತ ಎಂದು ಹೇಳುತ್ತಿದ್ದಾರೆ. ಇನ್ನೊಂದೆಡೆ ಕೆಂಪು ಟೋಪಿ ಅಪಾಯದ ಎಚ್ಚರಿಕೆ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಟೀಕಿಸಿದ್ದಾರೆ.
'ಸಮಾಜವಾದಿ ಪಕ್ಷ ಎಂದೂ ಉತ್ತರ ಪ್ರದೇಶದ ಜನರನ್ನು ತಮ್ಮವರೆಂದು ಪರಿಗಣಿಸಲಿಲ್ಲ. ಅವರ ನಡೆ ಕುಟುಂಬ ಕೇಂದ್ರಿತ ಹಾಗೂ ಪಾಕಿಸ್ತಾನ ಕೇಂದ್ರಿತವಾಗಿದೆ. 2017ರ ಮೊದಲು ರಾಜ್ಯದಲ್ಲಿ ಪ್ರತಿ ಮೂರು ದಿನಕ್ಕೊಮ್ಮೆ ಗಲಭೆಗಳು ನಡೆಯುತ್ತಿದ್ದವು. ಹೆಣ್ಮಕ್ಕಳು ತಮ್ಮ ಸುರಕ್ಷತೆಯ ಬಗ್ಗೆ ಭಯಪಡುತ್ತಿದ್ದರು. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದು ಸಂಪೂರ್ಣ ಬದಲಾಗಿದೆ' ಎಂದು ಆದಿತ್ಯನಾಥ್ ಹೇಳಿದರು.
'ಬಿಜೆಪಿ ಸರ್ಕಾರವು ಉತ್ತರ ಪ್ರದೇಶಕ್ಕೆ ಹೊಸ ಗುರುತನ್ನು ನೀಡಿದೆ. ಈಗ ಜನರು ಹಾಗೂ ಉದ್ಯಮಿಗಳು ವಲಸೆ ಹೋಗುತ್ತಿಲ್ಲ. ಉದ್ಯಮಿಗಳು ರಾಜ್ಯಕ್ಕೆ ಮರಳುತ್ತಿದ್ದು, ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ' ಎಂದು ಹೇಳಿದರು.
'ಕಳೆದ ಐದು ವರ್ಷಗಳಲ್ಲಿ 'ಡಬಲ್ ಎಂಜಿನ್' ಸರ್ಕಾರವು ರಾಜ್ಯವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ದಿದೆ' ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.