ADVERTISEMENT

ಅಯೋಧ್ಯೆಯಿಂದ 25 ಕಿ.ಮೀ ದೂರದಲ್ಲಿ ಮಸೀದಿಗೆ ಭೂಮಿ ಕೊಟ್ಟ ಉತ್ತರ ಪ್ರದೇಶ ಸರ್ಕಾರ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 12:28 IST
Last Updated 5 ಫೆಬ್ರುವರಿ 2020, 12:28 IST
   

ಲಖನೌ: ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಮಾಡಲು ಉತ್ತರ ಪ್ರದೇಶ ಸರ್ಕಾರವು ಸುನ್ನಿ ವಕ್ಫ್‌ ಮಂಡಳಿಗೆ ಐದು ಎಕರೆ ಪ್ರದೇಶವನ್ನು ಬುಧವಾರ ಮಂಜೂರು ಮಾಡಿದೆ.

ಅಯೋಧ್ಯೆಯ ಸೋಹವಾಲ್‌ ತಾಲೂಕಿನ ದನ್ನಿಪುರ ಗ್ರಾಮದಲ್ಲಿ ಸಾಗುವ ಲಖನೌ ಹೆದ್ದಾರಿ ಬಳಿ ನಿವೇಶನ ಗುರುತಿಸಲಾಗಿದೆ. ನಿವೇಶನವು ಜಿಲ್ಲಾ ಕೇಂದ್ರದಿಂದ 18 ಕಿ.ಮೀ, ಅಯೋಧ್ಯೆ ರಾಮ ಜನ್ಮ ಭೂಮಿಯಿಂದ 25 ಕಿ.ಮೀ ದೂರದಲ್ಲಿದೆ ಎಂದು ಉತ್ತರ ಪ್ರದೇಶ ಸರ್ಕಾರದ ವಕ್ತಾರ ಶ್ರೀಕಾಂತ್‌ ಶರ್ಮಾ ಅವರು ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲೆಂದು ಕೇಂದ್ರ ಸರ್ಕಾರ ಟ್ರಸ್ಟ್‌ರಚನೆ ಮಾಡಿದ ಕೆಲವೇ ಕ್ಷಣಗಳಲ್ಲಿ ನಡೆದ ಉತ್ತರ ಪ್ರದೇಶ ಸಚಿವ ಸಂಪುಟ ಸಭೆಯಲ್ಲಿ ಮಸೀದಿಗೆ ಭೂಮಿ ನೀಡುವ ನಿರ್ಧಾರ ಕೈಗೊಳ್ಳಲಾಯಿತು.

ADVERTISEMENT

‘ಮಸೀದಿ ನಿರ್ಮಾಣ ಉದ್ದೇಶಕ್ಕಾಗಿ ಮೂರು ನಿವೇಶನಗಳನ್ನು ಗುರುತಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಕೇಂದ್ರ ಸರ್ಕಾರ ಸದ್ಯ ದನ್ನಿಪುರ ಗ್ರಾಮದ ನಿವೇಶನಕ್ಕೆ ಒಪ್ಪಿಗೆ ನೀಡಿತ್ತು. ಅದನ್ನೇ ಮಂಜೂರು ಮಾಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಈ ನಿವೇಶನಕ್ಕೆ ಸಾರಿಗೆ ವ್ಯವಸ್ಥೆ ಉತ್ತಮವಾಗಿದ್ದು, ಕೋಮು ಸೌಹಾರ್ದ, ಕಾನೂನು ಸುವ್ಯವಸ್ಥೆ ಪರಿಪಾಲನೆಗೆ ಪ್ರಶಸ್ತವೆನಿಸುವಂತಿದೆ,’ ಎಂದು ಶ್ರೀಕಾಂತ್‌ ಶರ್ಮಾ ಹೇಳಿದ್ದಾರೆ.

ಸರ್ಕಾರ ನೀಡಿರುವ ಭೂಮಿಯ ಕುರಿತು ಚರ್ಚಿಸಲು ಇದೇ 24ರಂದು ಸುನ್ನಿ ವಕ್ಫ್‌ ಬೋರ್ಡ್‌ ಸಭೆ ಸೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.