ADVERTISEMENT

ತಾತನಿಂದ ಮೊಮ್ಮಗನ ರಕ್ಷಣೆ: ಬಾಲಕನ ಬಲಿಗೆ ಯತ್ನಿಸುತ್ತಿದ್ದ ಮಂತ್ರವಾದಿಗಳು!

ಐಎಎನ್ಎಸ್
Published 19 ಜನವರಿ 2023, 4:24 IST
Last Updated 19 ಜನವರಿ 2023, 4:24 IST
   

ಅಲಿಗಢ: ತಮ್ಮ 16 ವರ್ಷದ ಮೊಮ್ಮಗನನ್ನು ನಾಲ್ವರು ಮಂತ್ರವಾದಿಗಳು ಬಲಿ ಕೊಡಲು ಸಿದ್ಧತೆ ನಡೆಸುತ್ತಿದ್ದು, ಇದನ್ನು ಪ್ರತ್ಯಕ್ಷವಾಗಿ ಕಂಡ ತಾತ ಮೊಮ್ಮಗನನ್ನು ರಕ್ಷಿಸಿದ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ನಡೆದಿದೆ.

ನಾಲ್ವರು ಮಂತ್ರವಾದಿಗಳು ಬಾಲಕನನ್ನು ಮರಕ್ಕೆ ಕಟ್ಟಿ ಮಂತ್ರಗಳನ್ನು ಪಠಿಸುತ್ತಿದ್ದರು. ಆತನ ಕೈಗೆ ದೊಡ್ಡ ಚಾಕು ನೀಡಲಾಗಿತ್ತು. ಇದನ್ನು ಕಂಡ ಬಾಲಕನ ಅಜ್ಜ ಸಹಾಯಕ್ಕಾಗಿ ಕಿರುಚಿದ್ದಾರೆ. ಗಾಬರಿಗೊಂಡ ಮಂತ್ರವಾದಿಗಳು ಸ್ಥಳದಿಂದ ಕಾಲು ಕಿತ್ತಿದ್ದಾರೆ. ಎಫ್‌ಐಆರ್‌ ದಾಖಲಾಗಿದ್ದು, ನಾಲ್ವರು ಆರೋಪಿಗಳ ಪತ್ತೆಗೆ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಖಿಲೇಶ್ ಕುಮಾರ್ ಮಂತ್ರವಾದಿಗಳ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡ ಬಾಲಕ. ರಾತ್ರಿ ವೇಳೆ ಅಂಗಡಿಗೆ ಹೋಗಲೆಂದು ತನ್ನ ಮನೆಯಿಂದ ಹೊರಗೆ ಬಂದಿದ್ದ ಆತನನ್ನು ಮಂತ್ರವಾದಿಗಳು ಒತ್ತೆಯಾಳಾಗಿಸಿಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಮೊಮ್ಮಗ ಬರಲಿಲ್ಲವೆಂದು ತಾತ ಹುಡುಕಿಕೊಂಡು ಹೊರಟಾಗ ಪ್ರಕರಣ ಬೆಳಕಿಗೆ ಬಂದಿದೆ. ಅಖಿಲೇಶ್ ಕೈಗಳನ್ನು ಹಿಂದಿನಿಂದ ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಮರಕ್ಕೆ ಕಟ್ಟಿ ಹಾಕಲಾಗಿತ್ತು. ಮಂತ್ರವಾದಿಗಳು ಆತನನ್ನು ಬಲಿಕೊಡುವ ಆಚರಣೆ ನಡೆಸುತ್ತಿದ್ದರು.

ಸ್ಥಳದಿಂದ ಒಂದು ದೊಡ್ಡ ಚಾಕು, ಅರಿಶಿನ ಪುಡಿ, ಕೆಂಪು ದಾರ ಮತ್ತು ಸಿಂಧೂರ ಸೇರಿದಂತೆ ಪೂಜಾ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ತನನ್ನು ಮೊದಲು ಪ್ರಜ್ಞಾಹೀನವಾಗಿಸಿದ್ದರು ಎಂದು ಅಖಿಲೇಶ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.