ಸಾಂಕೇತಿಕ ಚಿತ್ರ
ಮೀರಠ್: ಸಿಸೇರಿಯನ್ (ಶಸ್ತ್ರಚಿಕಿತ್ಸೆ) ಮೂಲಕ ಹೆರಿಗೆ ಮಾಡಿಸಿದ ವೈದ್ಯೆಯೊಬ್ಬರು ರಕ್ತದ ಕಲೆ ಒರೆಸಲು ಬಳಸಿದ ಹತ್ತಿಯ ಉಂಡೆಯನ್ನು ಮಹಿಳೆಯ ಹೊಟ್ಟೆಯಲ್ಲೇ ಬಿಟ್ಟಿದ್ದ ಘಟನೆ ಉತ್ತರ ಪ್ರದೇಶದ ಮೀರಠ್ನಲ್ಲಿ ನಡೆದಿದೆ.
ಈ ಸಂಬಂಧ ರಜನಿ ಶರ್ಮಾ ಅವರು ನೀಡಿದ ದೂರಿನ ಮೇರೆಗೆ ನ್ಯಾಯಾಲಯವೊಂದು ನೀಡಿದ ಆದೇಶದ ಮೇರೆಗೆ ಈ ನಿರ್ಲಕ್ಷ್ಯ ತೋರಿದ ವೈದ್ಯೆ ವಿರುದ್ಧ ಟಿಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
‘2018ರ ಜೂನ್ 30ರಂದು ನಾನು ಸಿರೋಹಿ ನರ್ಸಿಂಗ್ ಹೋಂನಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದೆ. ಈ ಸಂದರ್ಭದಲ್ಲಿ ಡಾ. ಶಿಖಾ ಜೈನ್ ಅವರು ಶಸ್ತ್ರಚಿಕಿತ್ಸೆ ನಡೆಸಿದ್ದರು. ಆ ಬಳಿಕ ನನಗೆ ಆಗಾಗ ವಿಪರೀತ ಹೊಟ್ಟೆನೋವು ಕಾಣಿಸಿಕೊಳ್ಳಲಾರಂಭಿಸಿತು. ಪರಿಸ್ಥಿತಿ ತೀರ ಹದಗೆಟ್ಟಾಗ ನಾನು ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಆಗ, ನಾನು ಮಗುವಿಗೆ ಜನ್ಮ ನೀಡುವ ವೇಳೆ ವೈದ್ಯೆ ಡಾ. ಶಿಖಾ ಜೈನ್ ಅವರ ನಿರ್ಲಕ್ಷ್ಯದಿಂದ ನನ್ನ ಹೊಟ್ಟೆಯಲ್ಲೇ ಬಿಟ್ಟಿದ್ದ ಅರಳೆಯಿಂದ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿತ್ತು ಎಂಬುದು ಗೊತ್ತಾಗಿದೆ’ ಎಂದು ರಜನಿ ಶರ್ಮಾ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಡಾ. ಶಿಖಾ ಜೈನ್, ‘ನಾನು ಯಾವುದೇ ತಪ್ಪು ಮಾಡಿಲ್ಲ. ವೈದ್ಯರಿಂದ ಹಣ ಕೀಳಲು ಅನುಸರಿಸಿರುವ ಮಾರ್ಗವಿದು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.