ADVERTISEMENT

ಉತ್ತರ ಪ್ರದೇಶ: 10 ಸಾವಿರ ಖಾಲಿ ಮತಪತ್ರ ವಶ, ಎಸ್‌ಪಿ ಕಾರ್ಯಕರ್ತರಿಂದ ಪ್ರತಿಭಟನೆ

ಪಿಟಿಐ
Published 10 ಮಾರ್ಚ್ 2022, 2:48 IST
Last Updated 10 ಮಾರ್ಚ್ 2022, 2:48 IST
ಆರ್‌ಎಲ್‌ಡಿಯ ಜಯಂತ್ ಚೌಧರಿ ಜೊತೆಗೆ ಎಸ್‌ಪಿ ನಾಯಕ ಅಖಿಲೇಶ್ ಯಾದವ್ (ಪ್ರಾತಿನಿಧಿಕ ಚಿತ್ರ)
ಆರ್‌ಎಲ್‌ಡಿಯ ಜಯಂತ್ ಚೌಧರಿ ಜೊತೆಗೆ ಎಸ್‌ಪಿ ನಾಯಕ ಅಖಿಲೇಶ್ ಯಾದವ್ (ಪ್ರಾತಿನಿಧಿಕ ಚಿತ್ರ)   

ಮೊರಾದಾಬಾದ್: ವಾಹನವೊಂದರಿಂದ ಖಾಲಿ ಮತಪತ್ರಗಳನ್ನು ವಶಪಡಿಸಿಕೊಂಡಿರುವ ಸಮಾಜವಾದಿ ಪಕ್ಷದ ಕಾರ್ಯಕರ್ತರು ಅಜಂಗಡ ಮತ್ತು ಮೊರಾದಾಬಾದ್‌ನಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ. ಅಧಿಕೃತ ಮತ ಯಂತ್ರಗಳನ್ನು ಕೂಡ ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಎಸ್‌ಪಿ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದ್ದು, ಕಾರೊಂದು ತನ್ನ ಹೆಡ್‌ಲೈಟ್‌ ಅನ್ನು ಆಫ್ ಮಾಡಿಕೊಂಡು ಅಜಂಗಡದ ಸ್ಟ್ರಾಂಗ್ ರೂಂಗೆ 10 ಸಾವಿರ ಖಾಲಿ ಮತಪತ್ರಗಳನ್ನು ಕೊಂಡೊಯ್ಯಲು ಮುಂದಾಗಿತ್ತು ಎಂದಿದೆ.

ವಾರಾಣಸಿಯ ಆ ಕಾರನ್ನು ಎಸ್‌‌ಪಿ ಕಾರ್ಯಕರ್ತರು ಗೇಟ್ ಬಳಿಯಲ್ಲೇ ತಡೆದಿದ್ದಾರೆ. ಯಾರ ಆಜ್ಞೆಯ ಮೇಲೆ ಆ ಮತಪತ್ರಗಳನ್ನು ಕೊಂಡೊಯ್ಯಲಾಗುತ್ತಿತ್ತು? ಇದರ ಹಿಂದಿನ ಉದ್ದೇಶವೇನು? ಈ ಬಗ್ಗೆ ಚುನಾವಣಾ ಆಯೋಗ ಸ್ಫಷ್ಟಪಡಿಸಲಿ ಎಂದು ಎಸ್‌ಪಿ ಒತ್ತಾಯಿಸಿದೆ. ಇದರೊಂದಿಗೆ ಕಾರಿನ ಮತ್ತು ಎಸ್‌ಪಿ ಕಾರ್ಯಕರ್ತರ ಪ್ರತಿಭಟನೆಯ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ.

ADVERTISEMENT

ಬ್ಯಾಲೆಟ್ ಪೇಪರ್ ವಶಪಡಿಸಿಕೊಂಡಿರುವ ವಿಚಾರವಾಗಿ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಸೂಚನೆ ಮೇರೆಗೆ, ಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ನರೇಶ್ ಉತ್ತಮ್ ಪಟೇಲ್ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಚೌಧರಿಯನ್ನೊಳಗೊಂಡ ನಿಯೋಗ ಲಖನೌನಲ್ಲಿ ಚುನಾವಣೆ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿದೆ. ಲಿಖಿತ ದೂರು ನೀಡಿರುವ ಆಯೋಗ, ಮುಖ್ಯ ಚುನಾವಣಾಧಿಕಾರಿಗೂ ಒಂದು ಪ್ರತಿಯನ್ನು ರವಾನಿಸಿದೆ.

ಅಜಂಗಡದ ಜಿಲ್ಲಾ ಚುನಾವಣಾಧಿಕಾರಿ ಅಮೃತ್ ತ್ರಿಪಾಟಿ, 'ಆ ವಾಹನವು ಬ್ಲಾಕ್ ಅಭಿವೃದ್ಧಿ ಅಧಿಕಾರಿಗೆ(ಬಿಡಿಒ) ಸೇರಿದ್ದಾಗಿದೆ. ವಶಪಡಿಸಿಕೊಂಡ ಮತಪತ್ರಗಳು ಬಳಕೆಯಾಗದ ಅಂಚೆ ಮತಪತ್ರಗಳಾಗಿದ್ದು, ಅವುಗಳನ್ನು ಮತಪತ್ರಗಳ ಜೊತೆಗೆ ಸಲ್ಲಿಸಬೇಕಾಗಿತ್ತು. ಆದರೆ ಬಿಡಿಒ ಅವುಗಳನ್ನು ಸಲ್ಲಿಸಿಲ್ಲ. ಇವುಗಳೀಗ ಕೇವಲ ಕಾಗದಗಳಷ್ಟೆ. ಆದರೆ, ಬಿಡಿಒ ಅವರ ನಿರ್ಲಕ್ಷ್ಯದಿಂದ ಅವರ ಅಮಾನತಿಗೆ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲಾಗಿದ್ದು, ಈ ಬಗ್ಗೆ ಎಲ್ಲ ಅಭ್ಯರ್ಥಿಗಳಿಗೂ ಮಾಹಿತಿ ನೀಡಲಾಗಿದೆ' ಎಂದಿದ್ದಾರೆ.

ಮೊರಾದಾಬಾದ್‌ನ ಮಂಡಿ ಸಮಿತಿಯ ಸ್ಟ್ರಾಂಗ್ ರೂಮ್ ಬಳಿ ವಾಹನದಲ್ಲಿ ಬಚ್ಚಿಟ್ಟಿದ್ದ ಎರಡು ಮತಪೆಟ್ಟಿಗೆಗಳೊಂದಿಗೆ ತಹಸೀಲ್ದಾರ್ ಸಿಕ್ಕಿಬಿದ್ದ ನಂತರ ಭಾರಿ ಗದ್ದಲ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.