ADVERTISEMENT

ಮಂದಿರ ನಿರ್ಮಾಣ ಬೇಡಿಕೆ ಮತ್ತೆ ಮುನ್ನೆಲೆಗೆ

ಅಯೋಧ್ಯೆಯಲ್ಲಿ ಇಂದು ರಾಮ ಜನ್ಮಭೂಮಿ ಟ್ರಸ್ಟ್‌ನ ಸಭೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 19:45 IST
Last Updated 2 ಜೂನ್ 2019, 19:45 IST
   

ಲಖನೌ: ಅಯೋಧ್ಯೆಯ ವಿವಾದಿತ ನಿವೇಶನದಲ್ಲಿ ರಾಮ ಮಂದಿರ ನಿರ್ಮಾಣ ಬೇಡಿಕೆಯು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹಿನ್ನೆಲೆಗೆ ಸರಿದಿತ್ತು. ಬಿಜೆಪಿಯ ಭಾರಿ ಗೆಲುವಿನಿಂದ ಉತ್ತೇಜಿತವಾಗಿರುವ ಸಂತ ಸಮುದಾಯವು ಮಂದಿರ ನಿರ್ಮಾಣ ಬೇಡಿಕೆಗೆ ಶಕ್ತಿ ತುಂಬಲು ಮುಂದಾಗಿದೆ.

ಮಂದಿರ ನಿರ್ಮಾಣ ಮತ್ತು ಇತರ ವಿಚಾರಗಳ ಬಗ್ಗೆ ಚರ್ಚಿಸುವುದಕ್ಕಾಗಿ ರಾಮ ಜನ್ಮಭೂಮಿ ಟ್ರಸ್ಟ್‌ ಅಯೋಧ್ಯೆಯಲ್ಲಿ ಸೋಮವಾರ ಸಭೆ ಕರೆದಿದೆ. ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ಪ್ರಮುಖರು ಮತ್ತು ಅಯೋಧ್ಯೆಯ ಸಂತರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

‘ಈ ಸಭೆಯಲ್ಲಿ ರಾಮ ಮಂದಿರ ವಿಚಾರ ಖಂಡಿತವಾಗಿಯೂ ಚರ್ಚೆಗೆ ಬರಲಿದೆ’ ಎಂದು ವಿಎಚ್‌ಪಿಯ ಮುಖಂಡರೊಬ್ಬರು ಹೇಳಿದ್ದಾರೆ.

ADVERTISEMENT

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ತಕ್ಷಣವೇ ಆರಂಭವಾಗಬೇಕು. ವಿವಾದಿತ ನಿವೇಶನವನ್ನು ಮಂದಿರ ನಿರ್ಮಾಣಕ್ಕಾಗಿ ವಿಎಚ್‌ಪಿಗೆ ಹಸ್ತಾಂತರಿಸಬೇಕು ಎಂದು ಹಲವು ಸಾಧು ಸಂತರು ಒತ್ತಾಯಿಸಲು ಆರಂಭಿಸಿದ್ದಾರೆ.

ವಿವಾದವನ್ನು ಎನ್‌ಡಿಎ ಸರ್ಕಾರವು ಹಂತಹಂತವಾಗಿ ಪರಿಹರಿಸಲಿದೆ ಎಂದು ರಾಮಜನ್ಮಭೂಮಿ ಟ್ರಸ್ಟ್‌ನ ಸದಸ್ಯ ಮತ್ತು ಬಿಜೆಪಿಯ ಮಾಜಿ ಸಂಸದ ರಾಮವಿಲಾಸ್‌ ವೇದಾಂತಿ ಹೇಳಿದ್ದಾರೆ. ‘ಮೊದಲಿಗೆ, ವಿವಾದಿತ ನಿವೇಶನವನ್ನು ಟ್ರಸ್ಟ್‌ಗೆ ನೀಡಬೇಕು. ಅದಾದ ಬಳಿಕ ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ’ ಎಂದು ವೇದಾಂತಿ ಹೇಳಿದ್ದಾರೆ. ನರೇಂದ್ರ ಮೋದಿ ಅವರ ಎರಡನೇ ಅವಧಿಯಲ್ಲಿ ರಾಮ ಮಂದಿರ ನಿರ್ಮಾಣ ಆಗದಿದ್ದರೆ ದೆಹಲಿಯಲ್ಲಿ ಆತ್ಮಾಹುತಿ ಮಾಡಿಕೊಳ್ಳುವುದಾಗಿ ಸಂತ ಮಹಾಂತ ಸ್ವಾಮಿ ಪರಮಹಂಸ ದಾಸ ಅವರು ಬೆದರಿಕೆ ಒಡ್ಡಿದ್ದಾರೆ.

ಮಂದಿರ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಯಜ್ಞವೊಂದನ್ನು ನಡೆಸಲಾಗಿತ್ತು. ‘ರಾಮ ಮಂದಿರ ನಿರ್ಮಾಣದ ಭರವಸೆಯನ್ನು ಬಿಜೆಪಿಗೆ ನೆನಪಿಸಲು ನಾವು ಬಯಸುತ್ತೇವೆ’ ಎಂದು ತಾತ್ಕಾಲಿಕ ರಾಮ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.