ADVERTISEMENT

Election 2021 | ಜಾತಿ ಆಧಾರಿತ ಸಣ್ಣ ಪಕ್ಷಗಳ ಜತೆ ಎಸ್‌ಪಿ ನಂಟು

ಅಪ್ನಾ ದಳ, ಆರ್‌ಎಲ್‌ಡಿ ಬಳಿಕ ಜನವಾದಿ ಸೋಷಿಯಲಿಸ್ಟ್‌ ಪಕ್ಷದ ಜತೆಗೂ ಮೈತ್ರಿ ಮಾಡಿಕೊಂಡ ಅಖಿಲೇಶ್‌

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 19:45 IST
Last Updated 25 ನವೆಂಬರ್ 2021, 19:45 IST
ಅಖಿಲೇಶ್‌ ಯಾದವ್‌
ಅಖಿಲೇಶ್‌ ಯಾದವ್‌   

ಲಖನೌ: ಜಾತಿ ಆಧಾರಿತವಾಗಿರುವ ಸಣ್ಣ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವ ಕಾರ್ಯತಂತ್ರವನ್ನುಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್‌ ಯಾದವ್‌ ಇನ್ನಷ್ಟು ವಿಸ್ತರಿಸಿಕೊಂಡಿದ್ದಾರೆ. ಜನವಾದಿ ಸೋಷಿಯಲಿಸ್ಟ್‌ ಪಕ್ಷದ (ಜೆಎಸ್‌ಪಿ) ಅಧ್ಯಕ್ಷ ಸಂಜಯ್‌ ಚೌಹಾಣ್‌ ಜತೆಗೆ ಅಖಿಲೇಶ್‌ ಅವರು ಗುರುವಾರ ವೇದಿಕೆ ಹಂಚಿಕೊಂಡಿದ್ದಾರೆ. ಜೆಎಸ್‌ಪಿಗೆ ಚೌಹಾಣ್‌ ಸಮುದಾಯದ (ಇತರ ಹಿಂದುಳಿದ ವರ್ಗಗಳಲ್ಲಿ ಬರುವ ಜಾತಿ) ಬೆಂಬಲ ಇದೆ. ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಈ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಹಿಂದುಳಿದ ವರ್ಗದ ಜಾತಿಗಳೆಲ್ಲವೂ ಒಂದಾಗಿ ಬಿಜೆಪಿಯನ್ನು ಅಧಿಕಾರದಿಂದ ಉಚ್ಚಾಟಿಸಬೇಕು ಎಂದು ಅಖಿಲೇಶ್‌ ಅವರು ಎಸ್‌ಪಿ–ಜೆಎಸ್‌ಪಿ ಜಂಟಿ ಸಭೆಯನ್ನು ಉದ್ದೇಶಿಸಿ ಹೇಳಿದರು.

ವಿಮಾನ ನಿಲ್ದಾಣ ನಿರ್ಮಾಣದ ಹೊಸ ಯೋಜನೆ ಕೈಗೆತ್ತಿಕೊಂಡ ಕೇಂದ್ರ ಸರ್ಕಾರವನ್ನು ಅಖಿಲೇಶ್‌ ಟೀಕಿಸಿದ್ದಾರೆ. ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಿ ಅದನ್ನು ಖಾಸಗಿ ಸಂಸ್ಥೆಗಳಿಗೆ ಮಾರುವುದೇ ಸರ್ಕಾರದ ಉದ್ದೇಶ ಎಂದು ಅವರು ಹೇಳಿದರು.

ADVERTISEMENT

‘ಓಂ ಪ್ರಕಾಶ್‌ ರಾಜ್‌ಭರ್‌ ಅವರ ಸುಹೇಲ್‌ದೇವ್‌ ಭಾರತೀಯ ಸಮಾಜ ಪಕ್ಷ ಮತ್ತು ಕೃಷ್ಣಾ ಪಟೇಲ್‌ ಅವರ ಅಪ್ನಾ ದಳದ ಜತೆಗೆ ಈಗಾಗಲೇ ಮೈತ್ರಿ ಮಾಡಿಕೊಳ್ಳಲಾಗಿದೆ. ಈಗ, ಚೌಹಾಣ್‌ ಸಮುದಾಯವೂ ನಮ್ಮ ಜತೆಗೆ ಬಂದಿದೆ. ಇಷ್ಟೊಂದು ಪಕ್ಷಗಳ ಮೈತ್ರಿಕೂಟವನ್ನು ಯಾರೂ ಸೋಲಿಸಲಾಗದು’ ಎಂದು ಅಖಿಲೇಶ್‌ ಹೇಳಿದರು.

‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ನಮ್ಮ ಸಮುದಾಯವು ನಿರ್ಧಾರ ಮಾಡಿದೆ. ಬಿಜೆಪಿಗೆ ನಾವು ಪಾಠ ಕಲಿಸಲೇಬೇಕು. ನಮ್ಮ ಸಮುದಾಯದ ಅಭಿವೃದ್ಧಿಯು ಬಿಜೆಪಿಗೆ ಬೇಕಾಗಿಲ್ಲ’ ಎಂದು ಸಂಜಯ್‌ ಚೌಹಾಣ್‌ ಹೇಳಿದರು.

ಉತ್ತರ ಪ್ರದೇಶದ ಪೂರ್ವ ಭಾಗದ 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಚೌಹಾಣ್‌ ಸಮುದಾಯದ ಮತಗಳ ಪ್ರಮಾಣ ಗಣನೀಯವಾಗಿದೆ.

ಮೌರ್ಯ ಮತ್ತು ಸೈನಿ ಸಮುದಾಯಗಳ ಬೆಂಬಲ ಹೊಂದಿರುವ ಮಹಾನ್‌ ದಳದ ಜತೆಗೂ ಅಖಿಲೇಶ್‌ ಮಾತುಕತೆ ಆರಂಭಿಸಿದ್ದಾರೆ.

ಈ ಮಧ್ಯೆ, ರಘುರಾಜ್‌ ಪ್ರತಾಪ್‌ ಸಿಂಗ್‌ ಅಲಿಯಾಸ್‌ ರಾಜಾ ಭಯ್ಯಾ ಅವರು ಎಸ್‌ಪಿ ನಾಯಕ ಮುಲಾಯಂ ಸಿಂಗ್‌ ಯಾದವ್‌ ಅವರನ್ನು ಗುರುವಾರ ಭೇಟಿಯಾದರು. ಸುಮಾರು 30 ನಿಮಿಷ ಅವರಿಬ್ಬರು ಚರ್ಚಿಸಿದ್ದಾರೆ. ಇದೊಂದು ಸೌಜನ್ಯದ ಭೇಟಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ರಾಜಾ ಭಯ್ಯಾ ಅವರು ತಿಳಿಸಿದರು. ಇಬ್ಬರು ನಾಯಕರು ಮೈತ್ರಿಯ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ರಾಜಾ ಭಯ್ಯಾ ಅವರುಠಾಕೂರ್‌ ಸಮುದಾಯದ ಪ್ರಭಾವಿ ನಾಯಕ. ಉತ್ತರ ಪ್ರದೇಶದ ಪೂರ್ವ ಭಾಗದ ಹಲವು ಜಿಲ್ಲೆಗಳಲ್ಲಿ ಈ ಸಮುದಾಯದ ಜನಸಂಖ್ಯೆ ಗಣನೀಯವಾಗಿದೆ. ಎಸ್‌ಪಿ ಜತೆಗೆ ಮೈತ್ರಿ ಮಾಡಿಕೊಳ್ಳಲು ತಮಗೆ ಅಭ್ಯಂತರ ಇಲ್ಲ ಎಂದು ರಾಯಾ ಭಯ್ಯಾ ಅವರು ಈ ಹಿಂದೆಯೇ ಹೇಳಿದ್ದರು.

ಬಿಎಸ್‌ಪಿ ತೊರೆದ ಶಾಸಕಾಂಗ ಪಕ್ಷದ ನಾಯಕ

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಎಸ್‌ಪಿ ಶಾಸಕಾಂಗ ‍ಪಕ್ಷದ ನಾಯಕ ಶಾ ಆಲಂ ಅವರು ಶಾಸಕ ಸ್ಥಾನ ಮತ್ತು ಪಕ್ಷದ ಸದಸ್ಯತ್ವಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ‍ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರಿಗೆ ತಮ್ಮ ಮೇಲೆ ವಿಶ್ವಾಸ ಇಲ್ಲದ ಕಾರಣ ರಾಜೀನಾಮೆ ನೀಡಿದ್ದಾಗಿ ಹೇಳಿದ್ದಾರೆ. ಮುಂದೆ ಯಾವ ಪಕ್ಷಕ್ಕೆ ಸೇರಲಿದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ಆಲಂ ಅವರು 2012 ಮತ್ತು 2017ರ ವಿಧಾನಸಭಾ ಚುನಾವಣೆಯಲ್ಲಿ ಮುಬಾರಕ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು.

ಬಿಎಸ್‌ಪಿ ಮುಖಂಡ ಲಾಲ್‌ಜಿ ವರ್ಮಾ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದಲ್ಲಿ ಈ ವರ್ಷದ ಆರಂಭದಲ್ಲಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.