ADVERTISEMENT

ವರ ವಿಡಿಯೊಗ್ರಾಫರ್‌ ಕರೆತರಲಿಲ್ಲ ಎಂದು ‘ಮದುವೆ‘ ನಿರಾಕರಿಸಿದ ವಧು

​ಪ್ರಜಾವಾಣಿ ವಾರ್ತೆ
Published 30 ಮೇ 2022, 16:25 IST
Last Updated 30 ಮೇ 2022, 16:25 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಲಖನೌ: ಮದುವೆಗೆ ವಿಡಿಯೊಗ್ರಾಫರ್‌ ಕರೆತರಲು ವರ ವಿಫಲನಾದ ಕಾರಣ, ಕೋಪಗೊಂಡ ವಧು ಮದುವೆಯನ್ನೇ ನಿರಾಕರಿಸಿದ ಘಟನೆ ಉತ್ತರಪ್ರದೇಶದ ಕಾನ್ಪುರದ ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

ವರದಿಗಳ ಪ್ರಕಾರ, ವಧು-ವರರು ಭಾನುವಾರ ‘ಜೈಮಾಲ್’ (ಪರಸ್ಪರ ಮಾಲಾರ್ಪಣೆ) ಸಮಾರಂಭಕ್ಕೆ ಸಿದ್ಧರಾಗಿದ್ದರು. ಆದರೆ, ಈ ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿಯಲು ವೀಡಿಯೊಗ್ರಾಫರ್ ಅಥವಾ ಕ್ಯಾಮೆರಾಮನ್ ಇರಲಿಲ್ಲ. ವಿಷಯ ತಿಳಿದು ಕೋಪಗೊಂಡ ವಧು ತಕ್ಷಣವೇ ವೇದಿಕೆಯಿಂದ ಕೆಳಗಿಳಿದು ಸ್ನೇಹಿತನ ಮನೆಗೆ ಹೋದಳು.

‘ತನ್ನ ಜೀವನದ ಪ್ರಮುಖ ಕ್ಷಣವನ್ನು ಸೆರೆಹಿಡಿಯುವ ಬಯಕೆಯನ್ನು ಹೊಂದಿರದ ವ್ಯಕ್ತಿಯು, ತನ್ನ ಭಾವನೆಗಳಿಗೆ ಹೇಗೆ ಸಂವೇದನಾಶೀಲನಾಗಿರಲು ಸಾಧ್ಯ’ ಎಂದ ವಧು ಮದುವೆ ನಿರಾಕರಿಸಿದ್ದಾಳೆ. ಈ ಸಂಬಂಧ ವರನ ಕುಟುಂಬ ಹಾಗೂ ವಧುವಿನ ಕುಟುಂಬದ ಸದಸ್ಯರು ಮನವರಿಕೆ ಮಾಡಿಕೊಳ್ಳಲು ಪ್ರಯತ್ನಿಸಿದರೂ ವಧು ಮಾತ್ರ ವಾಪಸ್ ಬರಲಿಲ್ಲ.

ADVERTISEMENT

ಠಾಣೆ ಮೆಟ್ಟಿಲೇರಿದ ಕುಟುಂಬ: ವಿಡಿಯೊಗ್ರಾಫರ್ ಮತ್ತು ಛಾಯಾಗ್ರಹಕನನ್ನು ಕರೆತರುವಲ್ಲಿ ನಡೆಸಿದ ಪ್ರಯತ್ನದ ಬಗ್ಗೆ ವರ, ವಧುವಿಗೆ ವಿವರಿಸಲು ಪ್ರಯತ್ನಿಸಿದನಾದರೂ, ವಧು ಮಾತ್ರ ತನ್ನ ಪಟ್ಟು ಬಿಡಲಿಲ್ಲ. ಕೊನೆಗೆ ಸಮಸ್ಯೆ ಪರಿಹರಿಸಲು ಎರಡೂ ಕುಟುಂಬಗಳು ಸ್ಥಳೀಯ ಪೊಲೀಸ್ ಠಾಣೆ ಮೆಟ್ಟಿಲೇರಿದವು.

‌ಸುದೀರ್ಘ ಚರ್ಚೆಯ ನಂತರ, ಎರಡೂ ಕುಟುಂಬಗಳು ಪರಸ್ಪರ ವಿನಿಮಯ ಮಾಡಿಕೊಂಡ ನಗದು ಮತ್ತು ಉಡುಗೊರೆಗಳನ್ನು ಹಿಂದಿರುಗಿಸಲು ಒಪ್ಪಿಕೊಂಡವು. ‘ಪರಸ್ಪರ ತಿಳಿವಳಿಕೆಯೊಂದಿಗೆ ಸಮಸ್ಯೆಯನ್ನು ಬಗೆಹರಿಸಲಾಯಿತು’ ಎಂದು ಸ್ಥಳೀಯ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಡೋರಿ ಲಾಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.