ADVERTISEMENT

ಗುಲಾಂ ನಬಿ ಆಜಾದ್ ಉಚ್ಚಾಟನೆಗೆ ಆಗ್ರಹಿಸಿದ ಉತ್ತರ ಪ್ರದೇಶ ಕಾಂಗ್ರೆಸ್ ನಾಯಕ

ಪಿಟಿಐ
Published 29 ಆಗಸ್ಟ್ 2020, 7:29 IST
Last Updated 29 ಆಗಸ್ಟ್ 2020, 7:29 IST
ಗುಲಾಂ ನಬಿ ಆಜಾದ್
ಗುಲಾಂ ನಬಿ ಆಜಾದ್   

ಲಖನೌ: ಗುಲಾಂ ನಬಿ ಆಜಾದ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ನಸೀಬ್ ಪಠಾಣ್ ಆಗ್ರಹಿಸಿದ್ದಾರೆ.

‘ಪಕ್ಷದ ಕೆಲವು ನಾಯಕರು ಬರೆದಿರುವ ಪತ್ರದಿಂದ ನೋವಾಗಿದೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದರು. ಆದರೆ, ಈಗ ಪ್ರಕರಣ ಅಂತ್ಯವಾಗಿದೆ. ಇದಾದ ಬಳಿಕವೂ ಅವರು (ಆಜಾದ್) ಮಾಧ್ಯಮದವರ ಬಳಿ ಮಾತನಾಡಿದ್ದರು ಮತ್ತು ಆ ಬಗ್ಗೆ ಮರುದಿನ ಫೇಸ್‌ಬುಕ್‌ನಲ್ಲಿಯೂ ಪೋಸ್ಟ್ ಮಾಡಿದ್ದರು’ ಎಂದು ನಸೀಬ್ ಪಠಾಣ್ ಹೇಳಿದ್ದಾರೆ.

‘ಪಕ್ಷದ ಶಿಸ್ತು ಉಲ್ಲಂಘಿಸಿರುವ ಅವರನ್ನು ‘ಆಜಾದ್ (ಸ್ವತಂತ್ರ)’ಗೊಳಿಸಬೇಕು ಹಾಗೂ ಪಕ್ಷದಿಂದ ಉಚ್ಚಾಟಿಸಬೇಕು’ ಎಂದು ಅವರು ಹೇಳಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವನ್ನೂ ಬಿಡುಗಡೆ ಮಾಡಿದ್ದಾರೆ.

ಪಕ್ಷದ ನಾಯಕತ್ವದಲ್ಲಿ ಸುಧಾರಣೆಗೆ ಒತ್ತಾಯಿಸಿ 23 ನಾಯಕರು ಸೇರಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವುದು ಇತ್ತೀಚೆಗೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಪತ್ರಕ್ಕೆ ಸಹಿ ಹಾಕಿದವರಲ್ಲಿ ಆಜಾದ್ ಸಹ ಒಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.