ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರ್ಯಾಲಿಗಳಿಗೆ ಜನರನ್ನು ಸೇರಿಸಲು ಉತ್ತರ ಪ್ರದೇಶ ಸರ್ಕಾರ ಸಾರ್ವಜನಿಕರ ಹಣವನ್ನು ವ್ಯಯಿಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
’ಬಿಜೆಪಿಯ ಇಂಥ ಚಾಲಾಕಿ ರಾಜಕೀಯವನ್ನು ರಾಜ್ಯದ ಪ್ರತಿಯೊಬ್ಬರು ಅರ್ಥ ಮಾಡಿಕೊಂಡಿದ್ದಾರೆ’ ಎಂದು ಅವರು ಟೀಕಿಸಿದ್ದಾರೆ.
ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, ’ರ್ಯಾಲಿಗಳಿಗೆ ಜನರನ್ನು ಸೇರಿಸಲು ಅಧಿಕಾರಿಗಳು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾರೆ’ ಎಂಬ ಮಾಧ್ಯಮಗಳ ವರದಿಗಳ ತುಣುಕನ್ನು ಟ್ವೀಟ್ ಜೊತೆಗೆ ಲಗತ್ತಿಸಿದ್ದಾರೆ.
’ಲಾಕ್ಡೌನ್ ಸಮಯದಲ್ಲಿ, ಲಕ್ಷಾಂತರ ಕಾರ್ಮಿಕರು ದೆಹಲಿಯಿಂದ ಉತ್ತರ ಪ್ರದೇಶದ ತಮ್ಮ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲಿ ಹಿಂದಿರುಗುತ್ತಿದ್ದಾಗ ಬಿಜೆಪಿ ಸರ್ಕಾರ ಅವರಿಗೆ ಬಸ್ ವ್ಯವಸ್ಥೆ ಮಾಡಲಿಲ್ಲ. ಆದರೆ, ಪ್ರಧಾನಿ ಮತ್ತು ಗೃಹ ಸಚಿವರ ಕಾರ್ಯಕ್ರಮಗಳಿಗೆ ಜನ ಸೇರಿಸಲು ಸರ್ಕಾರ ಕೋಟಿಗಟ್ಟಲೆ ಸಾರ್ವಜನಿಕರ ಹಣವನ್ನು ವೆಚ್ಚ ಮಾಡುತ್ತಿದೆ’ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.
’ಉತ್ತರ ಪ್ರದೇಶದ ಪ್ರತಿ ಹಳ್ಳಿಯಲ್ಲೂ ಬಿಜೆಪಿ ಬಗ್ಗೆ ತೀವ್ರ ಅಸಮಾಧಾನವಿದೆ. ಲೆಕ್ಕದ ಅಂಗಡಿಯಲ್ಲಿ ಅಡುಗೆ ಕಲಿತಂತೆ ('ಜುಮ್ಲೋನ್ ಕಿ ದುಕಾನ್, ಫೀಕೆ ಪಕ್ವಾನ್) ಬಿಜೆಪಿ ರಾಜಕೀಯವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಂಡಿದ್ದಾರೆ. ಹಾಗಾಗಿ, ಬಿಜೆಪಿ ಈಗ ಕೋಟಿಗಟ್ಟಲೆ ಹಣ ಹೂಡಿ ಮತದಾರರ ಎದುರು ಮುಖ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ’ ಎಂದು ಅವರು ಕುಟುಕಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.