ಹರಿದ್ವಾರ: ರಿಷಿಕೇಶದ ಗವಿಯಲ್ಲಿ ವಾಸಿಸುವ 83 ವರ್ಷ ವಯೋಮಾನದ ಸಾಧುವೊಬ್ಬರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ₹1 ಕೋಟಿ ದೇಣಿಗೆ ನೀಡಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಉತ್ತರಾಖಂಡದಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದು, ರಿಷಿಕೇಶದ
ಸಾಧು ವಿಎಚ್ಪಿಗೆ ಒಂದು ಕೋಟಿ ರೂಪಾಯಿ ಕೊಟ್ಟಿರುವುದಾಗಿ ವರದಿಯಾಗಿದೆ.
'ಸುಮಾರು 50 ವರ್ಷಗಳಿಂದ ನಾನು ಗುಹೆಯಲ್ಲಿಯೇ ವಾಸಿಸುತ್ತಿದ್ದೇನೆ. ಗವಿಗೆ ಭೇಟಿ ನೀಡುವ ಭಕ್ತರು ನೀಡುವ ಕಾಣಿಕೆಗಳಿಂದ ನಾನು ಬದುಕುತ್ತಿದ್ದೇನೆ. ರಾಮ ಮಂದಿರ ನಿರ್ಮಾಣಕ್ಕಾಗಿ ವಿಎಚ್ಪಿ ನಡೆಸುತ್ತಿರುವ ಅಭಿಯಾನದ ಬಗ್ಗೆ ತಿಳಿಯುತ್ತಿದ್ದಂತೆ ದೇಣಿಗೆ ನೀಡಲು ನಾನು ನಿರ್ಧರಿಸಿದೆ' ಎಂದು ಸ್ವಾಮಿ ಶಂಕರ್ ದಾಸ್ ಹೇಳಿದ್ದಾರೆ.
ಸಾಧುವೊಬ್ಬರು ₹1 ಕೋಟಿ ಮೊತ್ತದ ಚೆಕ್ ನೀಡಿದ್ದು ಕಂಡು ಅಚ್ಚರಿಪಟ್ಟ ಬ್ಯಾಂಕ್ ಅಧಿಕಾರಿಗಳು, ಖಾತೆಯ ಪರಿಶೀಲನೆ ನಡೆಸಿದ್ದಾರೆ. ಅವರ ಖಾತೆಯಲ್ಲಿ ಅಷ್ಟು ಹಣ ಇರುವುದು ಖಾತ್ರಿಯಾಗಿದೆ. ಅನಂತರ ಆರ್ಎಸ್ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗುವ ಸ್ಥಳೀಯರನ್ನು ಅಧಿಕಾರಿಗಳು ಬ್ಯಾಂಕ್ಗೆ ಕರೆಸಿ, ರಾಮ ಮಂದಿರ ಟ್ರಸ್ಟ್ಗೆ ಸ್ವಾಮಿ ಶಂಕರ್ ದಾಸ್ ದೇಣಿಗೆ ನೀಡಲು ನೆರವಾಗಿದ್ದಾರೆ.
ಉತ್ತರಾಖಂಡದಲ್ಲಿ ವಿಎಚ್ಪಿ ಒಟ್ಟಾರೆ ₹5 ಕೋಟಿ ದೇಣಿಗೆ ಸಂಗ್ರಹಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.