ತಪೋವನ: ಉತ್ತರಾಖಂಡದಲ್ಲಿ ಹಿಮ ಕುಸಿತದಿಂದಾಗಿ ಉಂಟಾದ ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಸೋಮವಾರ ರಾತ್ರಿ 8ರ ವರೆಗೂ 26 ಮೃತದೇಹಗಳು ಪತ್ತೆಯಾಗಿವೆ.
'ಫೆಬ್ರುವರಿ 8ರ ರಾತ್ರಿ ಎಂಟರವರೆಗೂ 26 ದೇಹಗಳನ್ನು ಪತ್ತೆ ಮಾಡಲಾಗಿದೆ. ಇನ್ನೂ 171 ಜನರು ಕಣ್ಮರೆಯಾಗಿದ್ದಾರೆ, ಆ ಪೈಕಿ 35 ಜನರು ಸುರಂಗದಲ್ಲಿ ಸಿಲುಕಿದ್ದಾರೆಂದು ನಂಬಲಾಗಿದೆ. ಅಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ' ಎಂದು ಉತ್ತರಾಖಂಡದ ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ.
ಐಟಿಬಿಪಿ, ಭಾರತೀಯ ಸೇನೆ, ಎಸ್ಡಿಆರ್ಎಫ್ ಹಾಗೂ ಎನ್ಡಿಆರ್ಎಫ್ ಚಮೋಲಿಯ ತಪೋವನ ಸುರಂಗದಲ್ಲಿ ಜಂಟಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಬಿಆರ್ಒ ಜೋಶಿಮಠದ ರೇನಿ ಗ್ರಾಮದಲ್ಲಿ ರಸ್ತೆ ಸಂಪರ್ಕ ಪುನರ್ಸ್ಥಾಪಿಸುವ ಕಾರ್ಯಾಚರಣೆ ನಡೆಸುತ್ತಿದೆ.
ತಪೋವನ ಸುರಂಗದಲ್ಲಿ ಕೆಸರು ತುಂಬಿರುವುದರಿಂದ 100 ಮೀಟರ್ ನಂತರದ ಹಾದಿ ಕಠಿಣವಾಗಿದೆ. ಕೆಸರು, ಮಣ್ಣುಕಲ್ಲು ಮಿಶ್ರಣವನ್ನು ಹೊರಗೆ ತೆಗೆಯುವ ಪ್ರಯತ್ನದ ಜೊತೆಗೆ ರಕ್ಷಣಾ ತಂಡಗಳು 130 ಮೀಟರ್ ಮುಂದಕ್ಕೆ ಸಾಗಿವೆ. 'ಸುರಂಗದೊಳಗೆ ಸಿಲುಕಿರುವವರನ್ನು ಸುರಕ್ಷಿತವಾಗಿ ಹೊರತರುವ ಪ್ರಯತ್ನ ನಡೆಸಲಾಗುತ್ತಿದೆ' ಎಂದು ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.