ರಾಯಪುರ (ಪಿಟಿಐ): ವೀರ್ ಸಾವರ್ಕರ್ 1925ರಲ್ಲಿಯೇದೇಶ ವಿಭಜನೆಯ ಬೀಜ ಬಿತ್ತಿದ್ದರು ಎಂದು ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಭಾನುವಾರಹೇಳಿದರು. ಈ ಮೂಲಕಆಗಸ್ಟ್ 14 ಅನ್ನು ದೇಶ ವಿಭಜನೆಯ ಭಯಾನಕತೆ ನೆನಪಿನ ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿರುವ ಬಿಜೆಪಿಗೆ ತಿರುಗೇಟು ನೀಡಿದರು.
ಭಾನುವಾರ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸಾವರ್ಕರ್ 1925ರಲ್ಲಿಯೇ ದೇಶ ವಿಭಜನೆಯ ಬೀಜ ಬಿತ್ತಿದ್ದರು. ಎರಡು ರಾಷ್ಟ್ರದ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದೇ ಸಾವರ್ಕರ್. ಇದನ್ನು 1937ರಲ್ಲಿ ಮಹಮ್ಮದ್ ಆಲಿ ಜಿನ್ಹಾ ಬೆಂಬಲಿಸಿದರು. ಅವರು (ಬಿಜೆಪಿ) ವಿಭಜಕರು. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಪಾತ್ರ ಏನು’ ಎಂದು ಪ್ರಶ್ನಿಸಿದರು.
‘1942ರ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಆರ್ಎಸ್ಎಸ್ ಮತ್ತು ಬಿಜೆಪಿ ನಾಯಕರು ಚಳವಳಿಯನ್ನು ಹತ್ತಿಕ್ಕುವುದು ಹೇಗೆಂದು ಹೇಳುತ್ತಿದ್ದರು. ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ವೈಸರಾಯ್ಗೆ ಪತ್ರ ಬರೆದಿದ್ದರು. ಬ್ರಿಟಿಷರು ಭಾರತ ಬಿಟ್ಟು ತೊಲಗುವುದು ಅವರಿಗೆ ಇಷ್ಟ ಇರಲಿಲ್ಲ. ಇವತ್ತಿಗೂ ಅವರು ಮಹಾತ್ಮ ಗಾಂಧೀಜಿ ಅವರನ್ನು ಟೀಕಿಸುತ್ತಾರೆಯೇ ವಿನಃ ಬ್ರಿಟಿಷರನ್ನಲ್ಲ’ ಎಂದು ಆರೋಪಿಸಿದರು.
‘ಸಂಘದ ಕಚೇರಿಯಲ್ಲಿ ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತಿತರ ನೆರೆಯ ರಾಷ್ಟ್ರಗಳನ್ನು ಒಳಗೊಂಡ ಅಖಂಡ ಭಾರತದ ನಕ್ಷೆಯನ್ನು ಪ್ರದರ್ಶಿಸಲಾಗಿದೆ. ಒಂದು ಕಡೆ ಹಳೆಯ ನಕ್ಷೆಯನ್ನು ತೋರಿಸಿ ಪಾಕಿಸ್ತಾನ ಭಾರತಕ್ಕೆ ಸೇರಬೇಕು ಎನ್ನುತ್ತಾರೆ. ಇನ್ನೊಂದೆಡೆ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ ಎನ್ನುತ್ತಾರೆ. ಇಂಥ ಇಬ್ಬಗೆತನ ಏಕೆ’ ಎಂದು ಅವರು ವಾಗ್ದಾಳಿ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.