ನವದೆಹಲಿ: ರಾಜ್ಯಸಭಾ ಸಭಾಪತಿಯಾಗಿ ಎಂ.ವೆಂಕಯ್ಯ ನಾಯ್ಡು ಮೂರು ವರ್ಷಗಳನ್ನು ಪೂರೈಸಿದ್ದಾರೆ. ವಿಶೇಷವೆಂಬಂತೆ ಮೇಲ್ಮನೆಯಲ್ಲಿ ಬಾಕಿ ಉಳಿದಿದ್ದ 4,400ಕ್ಕೂ ಅಧಿಕ ಕಡತಗಳನ್ನು ಅವರು ಆಗಸ್ಟ್ ಮೊದಲ ವಾರದಲ್ಲಿ ವಿಲೇವಾರಿ ಮಾಡಿದ್ದಾರೆ.
ತಾವು ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪತಿಯಾಗಿ ಆಗಸ್ಟ್ 11ಕ್ಕೆ ಮೂರು ವರ್ಷ ಪೂರೈಸಲಿದ್ದು, ಇದರೊಳಗಾಗಿ ಬಾಕಿ ಇರುವ ಎಲ್ಲ ಕಡತಗಳನ್ನೂ ವಿಲೇವಾರಿ ಮಾಡಬೇಕು ಎಂದುರಾಜ್ಯಸಭೆ ಕಾರ್ಯದರ್ಶಿಗಳಿಗೆ ವೆಂಕಯ್ಯ ನಾಯ್ಡು ಸೂಚನೆ ನೀಡಿದ್ದರು. ಈ ಕಾರಣದಿಂದ ಕಡತ ವಿಲೇವಾರಿಗೆ ಅಧಿಕಾರಿಗಳು ಚುರುಕು ನೀಡಿದ್ದರು. ಕೆಲ ಕಡತಗಳು 2007ರಿಂದಲೂ ಬಾಕಿ ಉಳಿದಿದ್ದವು ಎಂದು ಮೂಲಗಳು ತಿಳಿಸಿವೆ.
ಸಭಾಪತಿ ಸೂಚನೆ ಕಾರಣದಿಂದ ಆಗಸ್ಟ್ ಮೊದಲ ವಾರದ ಎಂಟು ದಿನ ಉಳಿದೆಲ್ಲ ಕಡತಗಳ ವಿಲೇವಾರಿ ಮಾಡಿದರು. ಕೆಲ ಅಧಿಕಾರಿಗಳು ವಾರಾಂತ್ಯದಲ್ಲೂ ಬಂದು ಕೆಲಸ ಮಾಡಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ. ವಿಲೇವಾರಿಗೊಂಡ ಕಡತಗಳ ವಿವರ ಹಾಗೂ ಪರಿಹಾರ ನೀಡಿದ ಸಮಸ್ಯೆಗಳ ಕುರಿತು ಸಭಾಪತಿ ಕಚೇರಿಯು ಈಚೆಗೆ ಬಿಡುಗಡೆ ಮಾಡಿದೆ.
ಪಿಡುಗಿನ ಅವಧಿಯಲ್ಲೂ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ವೆಂಕಯ್ಯ ನಾಯ್ಡು ಅವರು, 70ಕ್ಕೂ ಅಧಿಕ ಸಾರ್ವಜನಿಕ ಸಮಾರಂಭ, 14 ಪದವಿ ಪ್ರದಾನ ಸಮಾರಂಭಗಳಲ್ಲಿ ಆನ್ಲೈನ್ ಮೂಲಕ ಭಾಗವಹಿಸಿದ್ದರು. ‘ಮಿಷನ್ ಕನೆಕ್ಟ್’ ಎಂಬ ಹೆಸರಿನಡಿ ರಾಜ್ಯಸಭೆಯ ಎಲ್ಲ ಸದಸ್ಯರು, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು ಸೇರಿದಂತೆ 1,600ಕ್ಕೂ ಅಧಿಕ ಜನರೊಂದಿಗೆ ಸಾಮಾಜಿಕ ಜಾಲತಾಣಗಳ ಮುಖಾಂತರ ಸಂವಾದ ನಡೆಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.