ADVERTISEMENT

ಆಕ್ಷೇಪಣೀಯ ಹೇಳಿಕೆ: ಅಖಿಲೇಶ್‌ ಕ್ಷಮೆಗೆ ವಿಎಚ್‌ಪಿ ಆಗ್ರಹ

ಮಠಾಧೀಶರು, ಮಾಫಿಯಾ ಮಧ್ಯೆ ಅಂತರವಿಲ್ಲ ಎಂದಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 15:22 IST
Last Updated 14 ಸೆಪ್ಟೆಂಬರ್ 2024, 15:22 IST
ಅಖಿಲೇಶ್‌ ಯಾದವ್‌
ಅಖಿಲೇಶ್‌ ಯಾದವ್‌   

ನವದೆಹಲಿ: ‘ಮಠಾಧೀಶರು ಹಾಗೂ ಮಾಫಿಯಾ ಮಧ್ಯೆ ಹೆಚ್ಚಿನ ಅಂತರವಿಲ್ಲ’ ಎಂದಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ, ಸಂಸದ ಅಖಿಲೇಶ್‌ ಯಾದವ್ ಅವರ ವಿರುದ್ಧ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಶನಿವಾರ ಆಕ್ರೋಶ ವ್ಯಕ್ತಪಡಿಸಿದೆ. ‘ಅಖಿಲೇಶ್‌ ಅವರು ಕ್ಷಮಾಚಿಸಬೇಕು’ ಎಂದೂ ಅದು ಒತ್ತಾಯಿಸಿದೆ.

‘ಅಖಿಲೇಶ್‌ ಯಾದವ್‌ ಅವರ ಹೇಳಿಕೆಯು ಅತ್ಯಂತ ಆಕ್ಷೇಪಣೀಯ. ಅವರು ಈ ರೀತಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಅವರ ಮತಬ್ಯಾಂಕ್‌ ಅನ್ನು ಸಂತುಷ್ಟಿಗೊಳಿಸಲು ಹಿಂದೂ ನಂಬಿಕೆ ಹಾಗೂ ಸಂತರ ಕುರಿತು ಆಗಾಗ್ಗೆ ಹೇಳಿಕೆ ನೀಡುತ್ತಲೇ ಇರುತ್ತಾರೆ’ ಎಂದು ವಿಎಚ್‌ಪಿಯ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್‌ ಎಂದರು.

‘ಯಾದವ್‌ ಅವರ ಹೇಳಿಕೆ ಕುರಿತು ‘ಇಂಡಿಯಾ’ ಮೈತ್ರಿಕೂಟವು ಯಾಕಾಗಿ ಮೌನವಹಿಸಿದೆ. ಸನಾತನ ಹಿಂದೂ ಸಮುದಾಯವನ್ನು ಅಪಮಾನಿಸುತ್ತಿರುವುದು ಪಿತೂರಿಯಂತೆ ತೋರುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಅಖಿಲೇಶ್‌ ಹಾಗೂ ಅವರ ಮೈತ್ರಿಕೂಟವು ಹಿಂದೂ ಸಮಾಜದ, ಸಂತರ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಹಿಂದೂ ಸಮಾಜವು ಪ್ರಜಾಸತ್ತಾತ್ಮಕವಾಗಿ ಅವರಿಗೆ ತಕ್ಕ ಉತ್ತರ ನೀಡುತ್ತದೆ’ ಎಂದರು.

ಅಖಿಲೇಶ್‌ ಹೇಳಿದ್ದೇನು?

ಅಖಿಲೇಶ್‌ ಯಾದವ್‌ ಅವರು ಗುರುವಾರ ಪತ್ರಿಕಾಗೋಷ್ಠಿ ನಡೆಸಿದ್ದರು. ‘ನೀವು ಅಪರಾಧಿಗಳ ಜಾತಿಯನ್ನು ಗುರುತಿಸುತ್ತೀರಿ ಎಂದು ಮುಖ್ಯಮಂತ್ರಿ ಆದಿತ್ಯನಾಥ್‌ ಅವರು ನಿಮ್ಮ ವಿರುದ್ಧ ಆರೋಪ ಮಾಡುತ್ತಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು’ ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಅಖಿಲೇಶ್‌ ‘ಮಠಾಧೀಶರು ಹಾಗೂ ಮಾಫಿಯಾ ನಡುವೆ ಹೆಚ್ಚಿನ ಅಂತವಿಲ್ಲ... ಸರ್ಕಾರವೇ ನೀಡಿರುವ ಅಂಕಿ ಅಂಶಗಳನ್ನು ಇಟ್ಟುಕೊಂಡು ಮಾತನಾಡುತ್ತಿದ್ದೇನೆ... ಎನ್‌ಕೌಂಟರ್‌ಗಳಿಗೆ ಹಿಂದುಳಿದ ವರ್ಗದವರು ದಲಿತರು ಹಾಗೂ ಮುಸ್ಲೀಮರೇ ಹೆಚ್ಚು ಗುರಿಯಾಗುತ್ತಿದ್ದಾರೆ...’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.