ಪೊನ್ಮುಡಿ
ಚೆನ್ನೈ: ಶೈವ ಹಾಗೂ ವೈಷ್ಣವ ಪಂಥಗಳ ಚಿಹ್ನೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ತಮಿಳುನಾಡು ಸಚಿವ ಕೆ. ಪೊನ್ಮುಡಿಯವರನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ. ಅಲ್ಲದೆ ಏಪ್ರಿಲ್ 15ರಂದು ರಾಜ್ಯದಾದ್ಯಂತ ಪ್ರತಿಭಟನೆ ಮಾಡುವುದಾಗಿ ಹೇಳಿದೆ.
ಹಿಂದೂ ಚಿಹ್ನೆಗಳ ಬಗ್ಗೆ ಸಚಿವರು ಅಸಭ್ಯ ಪದಗಳನ್ನು ಬಳಸಿದ್ದಾರೆ, ಇದನ್ನು ಯಾವುದೇ ನಾಗರಿಕ ಸಮಾಜವು ಸಹಿಸುವುದಿಲ್ಲ ಎಂದು ವಿಎಚ್ಪಿಯ ತಮಿಳುನಾಡು ರಾಜ್ಯ ಅಧ್ಯಕ್ಷ ಅಂಡಾಳ್ ಪಿ. ಚೊಕ್ಕಲಿಂಗಂ ಹೇಳಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಅವರು ಬೋಧಿಸುವ ಜಾತ್ಯತೀತತೆಗೆ ಬದ್ಧರಾಗಿದ್ದರೆ, ಪೊನ್ಮುಡಿ ಅವರನ್ನು ಸಚಿವ ಸ್ಥಾನದಿಂದ ತಕ್ಷಣ ತೆಗೆದುಹಾಕಬೇಕು ಎಂದು ಚೊಕ್ಕಲಿಂಗಂ ಆಗ್ರಹಿಸಿದ್ದಾರೆ.
ಪೊನ್ಮುಡಿ ಅವರನ್ನು ಸಚಿವರಾಗಿ ಮುಂದುವರಿಯಲು ಬಿಡಬಾರದು. ಅವರನ್ನು ಡಿಎಂಕೆಯಲ್ಲಿ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಿದ್ದು ಕೇವಲ ಕಣ್ಣೊರೆಸುವ ತಂತ್ರ ಎಂದು ಚೊಕ್ಕಲಿಂಗಂ ಹೇಳಿದ್ದಾರೆ.
ಪೊನ್ಮುಡಿ ಅವರ ಭಾಷಣವು ಸಿಎಂ ಕಚೇರಿ ಮತ್ತು ಅವರ ಗೌರವದ ಮೇಲೆ ನೇರ ವೈಯಕ್ತಿಕ ದಾಳಿಯಾಗಿದೆ ಎಂದು ವಿಎಚ್ಪಿ ನಾಯಕ ಹೇಳಿದ್ದಾರೆ.
‘ತಮಿಳುನಾಡು ವಿಎಚ್ಪಿ ಘಟಕ ಈ ವಿಷಯದ ಬಗ್ಗೆ ರಾಷ್ಟ್ರದಾದ್ಯಂತ ಪ್ರತಿಭಟಿಸಲಿದೆ. ಡಿಎಂಕೆಯ ಹುಸಿ ಜಾತ್ಯತೀತತೆಯನ್ನು ಮತ್ತು ಈ ಡಿಎಂಕೆ ಸರ್ಕಾರದ ಮುಂದುವರಿಕೆ ಹಿಂದೂಗಳಿಗೆ ಹೇಗೆ ಅವಮಾನವಾಗಿದೆ ಎಂಬುದನ್ನು ಜನರಿಗೆ ಹೇಳಲಿದ್ದೇವೆ’ ಎಂದು ಚೊಕ್ಕಲಿಂಗಂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.