
ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಟೀಕೆ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಸೋಮವಾರ ತರಾಟೆಗೆ ತೆಗೆದುಕೊಂಡಿದ್ದು, ‘ಸಚಿವರ ಹೇಳಿಕೆಯು ದೇಶಭಕ್ತರನ್ನು ಅವಮಾನಿಸುವ ಕುಂತಂತ್ರದ ಭಾಗ’ ಎಂದು ಹೇಳಿದೆ.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಎಚ್ಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮಿಲಿಂದ್ ಪರಾಂಡೆ, ‘ಹಿಂದೂಗಳು ಜಾಗೃತರಾಗುವುದನ್ನು ಸಹಿಸದ ಅನೇಕ ವ್ಯಕ್ತಿಗಳು ಭಾರತದಲ್ಲಿ ಇದ್ದಾರೆ. ಅವರು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಕೆಟ್ಟ ಪದಗಳನ್ನು ಬಳಸಿ ದೇಶಭಕ್ತ ಸಂಘಟನೆಗಳನ್ನು ಅವಮಾನಿಸುವುದು ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ’ ಎಂದು ವಾಗ್ದಾಳಿ ನಡೆಸಿದರು.
‘ಅವರು (ಖರ್ಗೆ) ಹೇಳಿದ್ದು ಸಂಪೂರ್ಣ ಸುಳ್ಳು ಮತ್ತು ಅದು ಅವರಿಗೂ ತಿಳಿದಿದೆ. ಆದರೆ, ದೇಶಭಕ್ತರ ಮಾನಹಾನಿ ಮಾಡುವ ಉದ್ದೇಶದಿಂದ ಆ ಕೆಲಸ ಮಾಡುತ್ತಾರೆ. ಅಂಥವರನ್ನು ಮತ್ತೆ ಅಧಿಕಾರಕ್ಕೆ ತರಬೇಕೇ ಎಂದು ಕರ್ನಾಟಕದ ಜನರು ಯೋಚಿಸಬೇಕು’ ಎಂದರು.
‘ಹಿಂದೂಗಳ ಹಿತಾಸಕ್ತಿಯಲ್ಲಿ ನಂಬಿಕೆ ಇರುವವರು ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರದಲ್ಲಿರಬೇಕು ಎಂದು ವಿಎಚ್ಪಿ ಯಾವಾಗಲೂ ಪ್ರತಿಪಾದಿಸುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.