ADVERTISEMENT

2024ರಲ್ಲಿ ಶ್ರೀಕೃಷ್ಣ ಜನ್ಮಭೂಮಿಗಾಗಿ ಹೋರಾಟ: ವಿಎಚ್‌ಪಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 14:43 IST
Last Updated 6 ಡಿಸೆಂಬರ್ 2021, 14:43 IST
ಅಲೋಕ್‌ ಕುಮಾರ್
ಅಲೋಕ್‌ ಕುಮಾರ್   

ನವದೆಹಲಿ: 2024ರಲ್ಲಿ ಮಥುರಾದ ಶ್ರೀಕೃಷ್ಣ ಜನ್ಮಭೂಮಿ ವಿವಾದವನ್ನು ಕೈಗೆತ್ತಿಕೊಳ್ಳುವುದಾಗಿ ವಿಶ್ವ ಹಿಂದೂ ಪರಿಷದ್‌ (ವಿಎಚ್‌ಪಿ) ಭಾನುವಾರ ಹೇಳಿದೆ.

ಶ್ರೀಕೃಷ್ಣ ಜನ್ಮಭೂಮಿ ವಿಚಾರ ತಮ್ಮ ಕಾರ್ಯಸೂಚಿಯಲ್ಲಿ ಇಲ್ಲ ಎಂದು ಈ ಮೊದಲು ವಿಎಚ್‌ಪಿ ಹೇಳಿತ್ತು. ಆದರೆ ಈಗ ತನ್ನ ನಿಲುವನ್ನು ಬದಲಿಸಿದೆ.

ಅಯೋಧ್ಯೆಯಲ್ಲಿ ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ವಿಎಚ್‌ಪಿ ರಾಷ್ಟ್ರೀಯ ಅಧ್ಯಕ್ಷ ಅಲೋಕ್‌ ಕುಮಾರ್‌, ‘ನಮ್ಮ ಸಂಪೂರ್ಣ ಗಮನ ಈಗ ರಾಮ ಮಂದಿರ ನಿರ್ಮಾಣದ ಕಡೆ ಇದೆ. ರಾಮ ಮಂದಿರ ಮುಕ್ತಾಯ ಆಗುವವರೆಗೆ ಮಥುರಾದ ಶ್ರೀಕೃಷ್ಣ ಜನ್ಮಭೂಮಿ ವಿಷಯವನ್ನು ಕೈಗೆತ್ತಿಕೊಳ್ಳುವುದಿಲ್ಲ. 2023ರ ವೇಳೆಗೆ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಆಗಲಿದೆ. 2024ರಲ್ಲಿ ಮಥುರಾ ವಿವಾದವನ್ನು ಕೈಗೆತ್ತಿಕೊಳ್ಳುತ್ತೇವೆ’ ಎಂದು ಹೇಳಿದರು.

ADVERTISEMENT

ಶ್ರೀಕೃಷ್ಣ ಜನ್ಮಭೂಮಿಗೆ ಹೊಂದಿಕೊಂಡತೆ ನಿರ್ಮಿಸಲಾಗಿರುವ ಶಾಹಿ ಈದ್ಗಾ ಮಸೀದಿ ಜಾಗವನ್ನು ಕೃಷ್ಣ ಮಂದಿರಕ್ಕಾಗಿ ಪಡೆಯಬೇಕೆಂಬ ಬೇಡಿಕೆಗೆ ದೇಶದ ಸಂತರ ಸಂಘಟನೆಯಾದ ‘ಅಖಿಲ ಭಾರತ ಅಖಾಡ ಪರಿಷದ್‌’ (ಎಐಎಪಿ) ಬೆಂಬಲ ನೀಡಿದೆ ಎಂದು ಅಲೋಕ್‌ ಕುಮಾರ್‌ ಹೇಳಿದ್ದಾರೆ.

‘ಮಥುರಾಗೆ ತಯಾರಾಗಿ’ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಬಿಜೆಪಿಗೆ ಬೆಂಬಲಿಗರಿಗೆ ಕರೆ ನೀಡಿದ್ದ ಬೆನ್ನಲ್ಲೇ ವಿಎಚ್‌ಪಿ ಈ ಹೇಳಿಕೆ ನೀಡಿದೆ.2024ರಲ್ಲಿ ಲೋಕಸಭೆ ಚುನಾವಣೆಗಳೂ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.