ಸಿ.ಪಿ.ರಾಧಾಕೃಷ್ಣನ್, ಬಿ.ಸುದರ್ಶನ ರೆಡ್ಡಿ
ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಗೆ ಇದೇ 9ರಂದು ನಡೆಯಲಿದ್ದು, ಆಡಳಿತಾರೂಢ ಎನ್ಡಿಎ ಮತ್ತು ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಆದರೆ ಬಿಜೆಡಿ, ಬಿಆರ್ಎಸ್ ಸೇರಿದಂತೆ 17 ಸಂಸದರು ತಾವು ಯಾರಿಗೆ ಮತ ಚಲಾಯಿಸುತ್ತೇವೆ ಎಂಬುದರ ಕುರಿತ ನಿರ್ಧಾರವನ್ನು ಪ್ರಕಟಿಸದ ಕಾರಣ ಕುತೂಹಲ ಮೂಡಿಸಿದೆ.
ಎನ್ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರದ ರಾಜ್ಯಪಾಲ, ತಮಿಳುನಾಡು ಮೂಲದ ಸಿ.ಪಿ.ರಾಧಾಕೃಷ್ಣನ್ ಮತ್ತು ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ, ತೆಲಂಗಾಣ ಮೂಲದ ಬಿ.ಸುದರ್ಶನ ರೆಡ್ಡಿ ಕಣದಲ್ಲಿದ್ದಾರೆ. ಯಾರಿಗೆ ಮತ ಚಲಾಯಿಸಬೇಕು ಎಂಬುದನ್ನು ನಿರ್ಧರಿಸದ 17 ಸಂಸದರನ್ನು ಹೊರತುಪಡಿಸಿ, ಉಳಿದ ಎಲ್ಲ ಸಂಸದರು ತಮ್ಮ ಪಕ್ಷಗಳ ಆಧಾರದ ಮೇಲೆ ಮತ ಚಲಾಯಿಸಿದರೆ ರಾಧಾಕೃಷ್ಣನ್ ಅವರು ರೆಡ್ಡಿ ಅವರ ವಿರುದ್ಧ 439–324 ಮತಗಳೊಂದಿಗೆ ಮುನ್ನಡೆ ಪಡೆದುಕೊಳ್ಳಲಿದ್ದಾರೆ.
ಪ್ರಸ್ತುತ ಮತದಾರರ ಸಂಖ್ಯೆ 781 (ರಾಜ್ಯಸಭೆ, ಲೋಕಸಭೆಯ ಸದಸ್ಯರು) ಆಗಿದೆ. ಮತದಾರರ ಪಟ್ಟಿ ಸಿದ್ಧವಾದ ಬಳಿಕ ಶಿಬು ಸೊರೇನ್ ಅವರು ನಿಧನರಾದರು. ಅವರ ಸ್ಥಾನವೂ ಸೇರಿದಂತೆ ಒಟ್ಟು ಏಳು ಸ್ಥಾನಗಳು ಖಾಲಿ ಇವೆ. ಬಿಜೆಡಿ ಏಳು, ಬಿಆರ್ಎಸ್ನ ನಾಲ್ವರು, ಅಕಾಲಿದಳ, ಜಡ್ಪಿಎಮ್ ಮತ್ತು ವಿಒಟಿಟಿಪಿಯ ತಲಾ ಒಬ್ಬರು ಹಾಗೂ ಮೂವರು ಸ್ವತಂತ್ರ ಸದಸ್ಯರು ತಮ್ಮ ಆದ್ಯತೆ ಯಾರಿಗೆ ಎಂಬುದರ ಸ್ಪಷ್ಟ ಸೂಚನೆ ಇಲ್ಲಿಯವರೆಗೂ ನೀಡಿಲ್ಲ.
‘ಯಾರಿಗೆ ಮತ ಚಲಾಯಿಸಬೇಕು ಎಂಬುದರ ಬಗ್ಗೆ ಪಕ್ಷದ ನಾಯಕತ್ವ ಸೂಕ್ತ ಸಮಯದಲ್ಲಿ ನಿರ್ಧರಿಸಲಿದೆ’ ಎಂದು ಬಿಜೆಡಿಯ ಸಸ್ಮಿತ್ ಪಾತ್ರ, ಬಿಆರ್ಎಸ್ನ ಕೆ. ಸುರೇಶ್ ರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ. ಜಡ್ಪಿಎಂ, ವಿಒಟಿಟಿಪಿ ಸಂಸದರು ಈ ಕುರಿತು ಪ್ರತಿಕ್ರಿಯಿಸಲಿಲ್ಲ. ಅಕಾಲಿದಳ ಮತ್ತು ಪಕ್ಷೇತರ ಸಂಸದ ಸಂಪರ್ಕ ಸಾಧ್ಯವಾಗಲಿಲ್ಲ.
‘ಇಂಡಿಯಾ’ ಕೂಟ ತೊರೆದಿರುವ ಎಎಪಿ ತನ್ನ 10 ಸಂಸದರ ಬೆಂಬಲವನ್ನು ರೆಡ್ಡಿ ಅವರಿಗೆ ಸೂಚಿಸಿದ್ದರೆ, ಯಾವುದೇ ಬಣದ ಜತೆ ಗುರುತಿಸಿಕೊಳ್ಳದ ವೈಎಸ್ಆರ್ ಕಾಂಗ್ರೆಸ್ ತನ್ನ 11 ಸದಸ್ಯರ ಬೆಂಬಲವನ್ನು ರಾಧಾಕೃಷ್ಣನ್ ಅವರಿಗೆ ನೀಡುವುದಾಗಿ ತಿಳಿಸಿದೆ.
ಗೋಪ್ಯ ಮತದಾನ ಆದ್ದರಿಂದ ಅಡ್ಡ ಮತದಾನದ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಇದರ ನಿರೀಕ್ಷೆಯಲ್ಲಿರುವ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ತಮ್ಮ ಅಭ್ಯರ್ಥಿಯ ಮತಗಳಿಕೆಯಲ್ಲಿ ಆಗಬಹುದಾದ ಏರಿಳಿಕೆ ಕುರಿತು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಮತದಾನ ಇದೇ 9ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೂ ನಡೆಯಲಿದೆ. ಅದೇ ದಿನ ಸಂಜೆ 6 ಗಂಟೆಗೆ ಮತ ಎಣಿಕೆ ನಡೆಯಲಿದ್ದು ಬಳಿಕ ಫಲಿತಾಂಶ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.