ADVERTISEMENT

ವಿಜಯ್ ಮಲ್ಯ ಭಾರತಕ್ಕೆ ಯಾವಾಗ ಬರುತ್ತಾರೆ? ಹೀಗಿದೆ ನ್ಯಾಯಾಲಯಕ್ಕೆ ನೀಡಿದ ಉತ್ತರ

ಪಿಟಿಐ
Published 18 ಫೆಬ್ರುವರಿ 2026, 11:00 IST
Last Updated 18 ಫೆಬ್ರುವರಿ 2026, 11:00 IST
ವಿಜಯ್ ಮಲ್ಯ
ವಿಜಯ್ ಮಲ್ಯ   

ಮುಂಬೈ: ವಂಚನೆ ಮತ್ತು ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ, ನಾನು ಭಾರತಕ್ಕೆ ಯಾವಾಗ ಬರುತ್ತೇನೆಂದು ಸ್ಪಷ್ಟವಾಗಿ ಹೇಳಲಾರೆ ಎಂಬುದಾಗಿ ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಬ್ರಿಟನ್ ಬಿಟ್ಟು ತೆರಳದಂತೆ ನನಗೆ ಕಾನೂನು ಪ್ರಕಾರ ನಿರ್ಬಂಧ ಹೇರಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ತಮ್ಮ ವಕೀಲ ಅಮಿತ್ ದೇಸಾಯಿ ಮೂಲಕ ನ್ಯಾಯಾಲಯಕ್ಕೆ ಹೇಳಿಕೆ ಸಲ್ಲಿಸಿರುವ ಮಲ್ಯ, ನನ್ನ ಬಳಿ ಪಾಸ್‌ಪೋರ್ಟ್ ಇಲ್ಲ. ಅದನ್ನು ಹಿಂದಿರುಗಿಸಲಾಗಿದೆ. ಹಾಗಾಗಿ, ಭಾರತಕ್ಕೆ ಬರುವ ಬಗ್ಗೆ ನಿರ್ದಿಷ್ಟ ದಿನಾಂಕವನ್ನು ಖಚಿತಪಡಿಸಲಾರೆ ಎಂದಿದ್ದಾರೆ.

ತಮ್ಮನ್ನು ದೇಶಭ್ರಷ್ಟ ಆರ್ಥಿಕ ಅಪರಾಧಗಳ ಅಪರಾಧಿ ಎಂದು ಘೋಷಿಸಿರುವುದರ ವಿರುದ್ಧ ಮಲ್ಯ ಸಲ್ಲಿಸಿರುವ ಅರ್ಜಿಯನ್ನು ಅವರು ಭಾರತಕ್ಕೆ ವಾಪಸಾಗದ ಹೊರತು ವಿಚಾರಣೆ ನಡೆಸುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಖಂಡ್ ಅವರನ್ನು ಒಳಗೊಂಡ ಪೀಠ ಕಳೆದ ವಾರ ಹೇಳಿತ್ತು. ಅಲ್ಲದೆ, ಭಾರತಕ್ಕೆ ಆಗಮಿಸುವ ಉದ್ದೇಶವಿದೆಯೇ ಎಂಬ ಬಗ್ಗೆ ಸ್ಪಷ್ಟಪಡಿಸುವಂತೆಯೂ ಕೋರ್ಟ್ ಸೂಚಿಸಿತ್ತು.

ADVERTISEMENT

2016ರಿಂದ ಬ್ರಿಟನ್‌ನಲ್ಲಿರುವ ಮಲ್ಯ, ತಮ್ಮನ್ನು ದೇಶಭ್ರಷ್ಟ ಆರ್ಥಿಕ ಅಪರಾಧಗಳ ಅಪರಾಧಿ ಎಂದು ಘೋಷಿಸಿರುವುದು ಮತ್ತು ದೇಶಭ್ರಷ್ಟ ಆರ್ಥಿಕ ಅಪರಾಧಗಳ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದಾರೆ.

70 ವರ್ಷದ ಮದ್ಯದ ದೊರೆ ಹಲವು ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲದ ಸುಸ್ಥಿದಾರರಾಗಿದ್ದಾರೆ. ಅಲ್ಲದೆ, ಹಣ ಅಕ್ರಮ ವರ್ಗಾವಣೆಯ ಆರೋಪವನ್ನೂ ಎದುರಿಸುತ್ತಿದ್ದಾರೆ.

ಈ ಪ್ರಕರಣಗಳ ವಿಚಾರಣೆಗೆ ಮಲ್ಯ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವ ಅಗತ್ಯವಿಲ್ಲ. ಮೇಲಾಗಿ ಅವರು ಬ್ರಿಟನ್‌ನಿಂದ ಹೊರಗೆ ತೆರಳುವುದಕ್ಕೆ ನಿರ್ಬಂಧವಿದೆ ಎಂದೂ ವಕೀಲ ದೇಸಾಯಿ ವಾದಿಸಿದ್ದಾರೆ. ಮಲ್ಯ ಹೇಳಿಕೆ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿರುವ ಹೈಕೋರ್ಟ್, ಪ್ರಕರಣದ ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಿದೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿಯ(ಪಿಎಂಎಲ್‌ಎ) ಪ್ರಕರಣಗಳ ವಿಚಾರಣೆ ನಡೆಸುತ್ತರುವ ವಿಶೇಷ ನ್ಯಾಯಾಲಯವು 2019ರ ಜನವರಿಯಲ್ಲಿ ಮಲ್ಯ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಗಳ ಅಪರಾಧಿ ಎಂದು ಘೋಷಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.