ಲಖನೌ: ಎನ್ಕೌಂಟರ್ನಲ್ಲಿ ಹತನಾದ ರೌಡಿ ಶೀಟರ್ ವಿಕಾಸ್ ದುಬೆ ಸಹಚರ ಶಶಿಕಾಂತ್ ಅಲಿಯಾಸ್ ಸೋನು ಪಾಂಡೆಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಕಾನ್ಪುರದ ಬಿಕ್ರು ಗ್ರಾಮದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಲೂಟಿ ಮಾಡಲಾಗಿದ್ದ ಎರಡು ರೈಫಲ್ಗಳನ್ನು ಸಹ ಈತನಿಂದ ವಶಪಡಿಸಿಕೊಳ್ಳಲಾಗಿದೆ.
‘ಉತ್ತರ ಪ್ರದೇಶದ ಚೌಬೆಪುರದ ಬಳಿ ಸೋಮವಾರ ರಾತ್ರಿ ಶಶಿಕಾಂತ್ನನ್ನು ಬಂಧಿಸಲಾಗಿದೆ. ಕಾನ್ಪುರ ಜಿಲ್ಲೆಯ ಬಿಕ್ರು ಗ್ರಾಮದಲ್ಲಿ ಪೊಲೀಸರ ಮೇಲೆ ದಾಳಿಯಲ್ಲಿ ತಾನು ಭಾಗಿಯಾಗಿರುವುದಾಗಿ ಈತ ಒಪ್ಪಿಕೊಂಡಿದ್ದಾನೆ. ಪೊಲೀಸರಿಂದ ಲೂಟಿ ಮಾಡಲಾಗಿದ್ದ ಎಕೆ–47 ರೈಫಲ್ ಅನ್ನು ದುಬೆ ಮನೆಯಲ್ಲಿರಿಸಿದ್ದ. ಇನ್ನೊಂದು ‘ಐಎನ್ಎಸ್ಎಎಸ್’ ರೈಫಲ್ ಅನ್ನು ತನ್ನ ಮನೆಯಲ್ಲಿರಿಸಿಕೊಂಡಿದ್ದ’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
'ಬಿಕ್ರು ಗ್ರಾಮದಲ್ಲಿನ ದಾಳಿಗೆ ಸಂಬಂಧಿಸಿದಂತೆ 21 ಆರೋಪಿಗಳಲ್ಲಿ ಆರು ಮಂದಿ ಎನ್ಕೌಂಟರ್ನಲ್ಲಿ ಹತರಾಗಿದ್ದಾರೆ. ನಾಲ್ವರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆದಿದೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.