ADVERTISEMENT

ಸೋ‌ಂಕು ವ್ಯಾಪಿಸಿದೆ, ಆದರೆ ಶಾಶ್ವತ ಲಾಕ್‌ಡೌನ್‌ ಸಾಧ್ಯವಿಲ್ಲ: ಕೇಜ್ರಿವಾಲ್‌

ಏಜೆನ್ಸೀಸ್
Published 30 ಮೇ 2020, 10:28 IST
Last Updated 30 ಮೇ 2020, 10:28 IST
ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌
ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌   

ನವದೆಹಲಿ: 'ಇದು ಕಾಳಜಿಯ ಪ್ರಶ್ನೆ, ಆದರೆ ಭಯ ಪಡುವಂಥದ್ದು ಇಲ್ಲ. ನಾನು ನಿಮಗೆ ಭರವಸೆ ನೀಡುತ್ತೇನೆ, ನಿಮ್ಮ ಸರ್ಕಾರ ಕೊರೊನಾ ವೈರಸ್‌ಗಿಂತ ನಾಲ್ಕು ಹೆಜ್ಜೆ ಮುಂದಿದೆ' ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಶನಿವಾರ ಹೇಳಿದ್ದಾರೆ.

ಕೊರೊನಾ ವೈರಸ್‌ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಮೇ 31ರ ವರೆಗೂ ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದೆ. 'ದೇಶಶಾಶ್ವತ ಲಾಕ್‌ಡೌನ್‌ನಲ್ಲಿ ಉಳಿಯುವಂತಿಲ್ಲ' ಎಂಬುದನ್ನು ಒತ್ತಿ ಹೇಳಿದ್ದಾರೆ.

'ದೆಹಲಿಯಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ, ಅದನ್ನು ನಾವು ಒಪ್ಪುತ್ತೇವೆ. ಆದರೆ, ಅದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ನಿಮಗೆ ಭರವಸೆ ನೀಡುತ್ತಿದ್ದೇನೆ ನಾವು ಪೂರ್ಣ ಸಜ್ಜಾಗಿದ್ದೇವೆ. ನಾವು ಶಾಶ್ವತ ಲಾಕ್‌ಡೌನ್‌ನಲ್ಲಿ ಇರಲು ಸಾಧ್ಯವಿಲ್ಲ' ಎಂದು ಕೇಜ್ರಿವಾಲ್‌ ದೆಹಲಿಯ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ADVERTISEMENT

ದೆಹಲಿಯಲ್ಲಿ ಇಂದು ಕೊರೊನಾ ವೈರಸ್ ಸೋಂಕು ಪ್ರಕರಣಗಳು 17,386 ತಲುಪಿದ್ದು, 398 ಮಂದಿ ಸಾವಿಗೀಡಾಗಿದ್ದಾರೆ. ದೇಶದಲ್ಲಿ ಮಹಾರಾಷ್ಟ್ರ ಅತಿ ಹೆಚ್ಚು ಕೋವಿಡ್–19 ಪ್ರಕರಣಗಳನ್ನು ಹೊಂದಿದ್ದು, ತಮಿಳು ನಾಡು, ದೆಹಲಿ ಹಾಗೂ ಗುಜರಾತ್‌ ನಂತರದ ಸ್ಥಾನಗಳಲ್ಲಿವೆ.

ದೆಹಲಿಯಲ್ಲಿ ಒಟ್ಟು ಸೋಂಕು ಪ್ರಕರಣಗಳ ಪೈಕಿ 2,100 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಅವರ ಮನೆಗಳಲ್ಲಿಯೇ ಚಿಕಿತ್ಸೆಗೆ ಒಳಗಾಗಿದ್ದಾರೆ. ಚಿಕಿತ್ಸೆಗಾಗಿ ಈಗಾಗಲೇ 6,500 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ ಹಾಗೂ ಮುಂದಿನ ವಾರದಲ್ಲಿ ಇನ್ನೂ 9,500 ಹಾಸಿಗೆಗಳು ಸಿದ್ಧವಾಗಲಿವೆ. ಬಳಹಷ್ಟು ಜನರು ಚೇತರಿಸಿಕೊಳ್ಳುತ್ತಿದ್ದಾರೆ, ಮನೆಗಳಲ್ಲಿಯೇ ಗುಣಮುಖರಾಗುತ್ತಿದ್ದಾರೆ. ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಗುರುವಾರ ದೆಹಲಿ ಮೊದಲ ಬಾರಿಗೆ ಒಂದೇ ದಿನದಲ್ಲಿ ಅತಿ ಹೆಚ್ಚು, 1,024 ಪ್ರಕರಣಗಳು ದಾಖಲಾಗಿದ್ದವು.

ಸ್ವಲ್ಪ ಮಟ್ಟಿನ ಸೋಂಕು ಲಕ್ಷಣಗಳು ಕಾಣಿಸಿಕೊಂಡವರಿಗೆ ಚಿಕಿತ್ಸೆಗಾಗಿ ಸರ್ಕಾರ ಇದೇ ಮೊದಲ ಬಾರಿಗೆ ಐದು ಆಸ್ಪತ್ರೆಗಳನ್ನು 'ಕೋವಿಡ್ ಆಸ್ಪತ್ರೆಗಳಾಗಿ' ಅಧಿಸೂಚನೆ ಹೊರಡಿಸಿದೆ. ಜೆಡಬ್ಲ್ಯು ಮ್ಯಾರಿಯಟ್‌, ಲೀ ಮೆರಿಡಿಯನ್‌ ಹಾಗೂ ಐಬಿಐಎಸ್‌, ಸಾಕೇತ್‌ನ ಹೊಟೇಲ್‌ ಶೆರ್ಟನ್‌ ಹಾಗೂ ನ್ಯೂ ಫ್ರೆಂಡ್ಸ್‌ ಕಾಲೋನಿಯ ಹೊಟೇಲ್‌ ಸೂರ್ಯ ವಿಸ್ತರಿಸಿದ ಕೋವಿಡ್‌ ಆಸ್ಪತ್ರೆಗಳಾಗಿ ಸೇವೆ ನೀಡಲಿವೆ.

ನಿತ್ಯ 1,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾದರೂ ಅದನ್ನು ನಿರ್ವಹಿಸಲು ಸರ್ಕಾರ ಸಜ್ಜಾಗಿರುವುದಾಗಿ ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್‌ ಜೈನ್‌ ಶುಕ್ರವಾರ ಹೇಳಿದ್ದರು. ಸೋಂಕು ಲಕ್ಷಣಗಳು ಕಾಣಿಸಿಕೊಳ್ಳದ ಕೋವಿಡ್‌–19 ದೃಢಪಟ್ಟಿರುವ ರೋಗಿಗಳು ಆತಂಕಕ್ಕೆ ಒಳಗಾಗದೆ, ಆಸ್ಪತ್ರೆಗೆ ದಾಖಲಾಗುವ ಬದಲು ಮನೆಯೊಳಗೆ ಪ್ರತ್ಯೇಕವಾಗಿರುವ ಅವಕಾಶವನ್ನು ದೆಹಲಿ ಸರ್ಕಾರ ನೀಡಿದೆ. ಸೋಂಕಿತರು ಹೋಂ ಕ್ವಾರಂಟೈನ್‌ನಲ್ಲಿ ಮಾಡಬೇಕಾದ ಹಾಗೂ ಮಾಡಬಾರದ ಚಟುವಟಿಕೆಗಳ ಕುರಿತು ವಿಡಿಯೊ ಒಂದನ್ನು ನ್ಯೂಸ್ ಚಾನೆಲ್‌ಗಳ ಮೂಲಕ ಪ್ರಸಾರ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.