ವಿಶಾಖಪಟ್ಟಣ: ದಸರಾ ಹಬ್ಬದ ಪ್ರಯುಕ್ತ ಇಲ್ಲಿನ ಶ್ರೀ ಕನ್ನಿಕಾ ಪರಮೇಶ್ವರಿ ದೇವಿಯು ಕೋಟ್ಯಂತರ ರೂಪಾಯಿ ಮೌಲ್ಯದ ನೋಟು, ಬಂಗಾರದ ಒಡವೆಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದ್ದಾಳೆ.
ದೇವಿಗೆ ₹2 ಕೋಟಿ ಬೆಲೆ ಬಾಳುವ 8ಕೆಜಿ ಚಿನ್ನದ ಒಡವೆಗಳು ಹಾಗೂ ₹2.5 ಕೋಟಿ ಹಣವನ್ನು ಬಳಸಿಕೊಂಡು ದೇವಾಲಯದ ಒಳಾಂಗಣ ಹಾಗೂ ದೇವಿಯ ವಿಗ್ರಹವನ್ನು ಅಲಂಕಾರ ಮಾಡಲಾಗಿದೆ ಎಂದು ದೇವಾಲಯದ ಸಂಘಟನಾ ಸಮಿತಿ ಹೇಳಿದೆ.
ಸಂಪ್ರದಾಯದ ಪ್ರಕಾರ, 140 ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯದ ದೇವಿಯನ್ನು ಪ್ರತಿವರ್ಷವೂ ಇದೇ ರೀತಿಯಲ್ಲಿ ಅಲಂಕಾರ ಮಾಡಲಾಗುತ್ತದೆ. ಇದಕ್ಕೆ ಭಾರತ ಹಾಗೂ ವಿದೇಶಿ ನೋಟುಗಳನ್ನು ಬಳಸಲಾಗುತ್ತದೆ. ದೇವಿಯ ಪೂಜೆಗೆ ಹಣ, ಬಂಗಾರ ನೀಡುವುದು ದೊಡ್ಡ ಅದೃಷ್ಟ ಎಂದು ಭಕ್ತರು ನಂಬಿದ್ದಾರೆ. ಇದೆಲ್ಲವೂ ಜನರ ಕೊಡುಗೆ. ಪೂಜೆಯಾದ ಬಳಿಕ ಅವರವರ ಹಣವನ್ನು ಹಿಂತಿರುಗಿಸಲಾಗುತ್ತದೆ. ಈ ಹಣ ದೇವಾಲಯದ ಟ್ರಸ್ಟ್ಗೆ ಸೇರುವುದಿಲ್ಲ ಎಂದು ದೇವಾಲಯ ಸಂಘಟನಾ ಸಮಿತಿಯ ಮುಖ್ಯಸ್ಥ ಕೊಲ್ಲೂರು ವೆಂಕಟೇಶ್ವರ ರಾವ್ ತಿಳಿಸಿದ್ದಾರೆ.
ದೇವಿಯ ಪಾದದ ಬಳಿ ಹಣವನ್ನು ಇರಿಸುವುದರಿಂದ ಉದ್ಯಮದಲ್ಲಿಅದೃಷ್ಟ ಒಲಿಯಲಿದೆ. ಉತ್ತಮ ಆದಾಯ ಸಿಗಲಿದೆ ಎಂದು ಜನರು ನಂಬಿದ್ದಾರೆ ಎಂದು ರಾವ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.