ನವದೆಹಲಿ: ಲೋಕಸಭೆಯ ಅಂಗೀಕಾರ ಪಡೆದಿರುವ ವಕ್ಫ್ (ತಿದ್ದುಪಡಿ) ಮಸೂದೆಗೆ ರಾಜ್ಯಸಭೆಯು ಶುಕ್ರವಾರ ನಸುಕಿನ 2.30ಕ್ಕೆ ಅಂಗೀಕಾರ ನೀಡಿತು. ಮಸೂದೆಯ ಪರವಾಗಿ 128 ಮಂದಿ, ವಿರುದ್ಧವಾಗಿ 95 ಮಂದಿ ಮತ ಚಲಾಯಿಸಿದರು.
ಮಸೂದೆಯನ್ನು ರಾಜ್ಯಸಭೆ ಯಲ್ಲಿ ಮಂಡಿಸಿದ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಮುಸ್ಲಿಮರ ಹಕ್ಕುಗಳನ್ನು ಈ ಮಸೂದೆಯು ಕಿತ್ತುಕೊಳ್ಳುತ್ತದೆ ಎಂಬ ಆರೋಪಗಳನ್ನು ಅಲ್ಲಗಳೆದರು.
‘ಈ ಮಸೂದೆಯು ಮುಸ್ಲಿಂ ಮಹಿಳೆಯರಿಗೆ ಬಲ ತುಂಬುವ, ಮುಸ್ಲಿಮರಲ್ಲಿ ಎಲ್ಲರ ಹಕ್ಕುಗಳನ್ನು ರಕ್ಷಿಸುವ ಉದ್ದೇಶ ಹೊಂದಿದೆ’ ಎಂದರು. ಮಸೂದೆಯನ್ನು ವಿರೋಧಿಸಿ ವಿರೋಧ ಪಕ್ಷಗಳ ಕೆಲವು ಸದಸ್ಯರು ಸದನದಲ್ಲಿ ಗುರುವಾರ ಕಪ್ಪು ವಸ್ತ್ರ ಧರಿಸಿದ್ದರು. ಈ ಮಸೂದೆಗೂ ಧರ್ಮಕ್ಕೂ ಸಂಬಂಧ ಇಲ್ಲ. ಇದು ಆಸ್ತಿಗೆ ಮಾತ್ರ ಸಂಬಂಧಿಸಿದೆ ಎಂದು ರಿಜಿಜು ವಿವರಣೆ ನೀಡಿದರು.
ಲೋಕಸಭೆಯಲ್ಲಿ ವ್ಯಕ್ತವಾದಂತೆಯೇ, ರಾಜ್ಯಸಭೆಯಲ್ಲಿಯೂ ಈ ಮಸೂದೆಗೆ ವಿರೋಧ ಪಕ್ಷಗಳ ಸದಸ್ಯ ರಿಂದ ವಿರೋಧ ವ್ಯಕ್ತವಾಯಿತು. ಮಸೂ ದೆಯು ಮುಸ್ಲಿಮರನ್ನು ಹತ್ತಿಕ್ಕಲು ಯತ್ನಿಸು ತ್ತದೆ, ಇದು ದೇಶದಲ್ಲಿ ತಾರತಮ್ಯದ ಬೀಜ ವನ್ನು ಬಿತ್ತುತ್ತದೆ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದರು.
ಮಸೂದೆಯಲ್ಲಿರುವ ಅಂಶಗಳು ಹಾಗೂ ಮಸೂದೆಯ ಉದ್ದೇಶವು ಸರ್ಕಾರದ ನಡೆಯ ಬಗ್ಗೆ ಪ್ರಶ್ನೆಗಳು ಏಳುವಂತೆ ಮಾಡಿದೆ ಎಂದು ಆರ್ಜೆಡಿ ಸದಸ್ಯ ಮನೋಜ್ ಝಾ ಹೇಳಿದರು. ಮಸೂದೆಗೆ ರಾಜ್ಯಸಭೆಯ ಅಂಗೀಕಾರ ಪಡೆಯಲು ಅವಸರ ಮಾಡುವುದು ಬೇಡ, ಮಸೂದೆಯನ್ನು ಸಂಸತ್ತಿನ ಪರಿ ಶೀಲನಾ ಸಮಿತಿಗೆ ಮತ್ತೊಮ್ಮೆ ಒಪ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.