ADVERTISEMENT

ವಕ್ಫ್ ವಸೂದೆ: ಭವಿಷ್ಯದಲ್ಲಿ ಇತರೆ ಸಮುದಾಯಗಳ ಮೇಲಿನ ದಾಳಿಗೆ ಮುನ್ಸೂಚನೆ; ರಾಹುಲ್

ಪಿಟಿಐ
Published 5 ಏಪ್ರಿಲ್ 2025, 11:15 IST
Last Updated 5 ಏಪ್ರಿಲ್ 2025, 11:15 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

–ಪಿಟಿಐ ಚಿತ್ರ

ನವದೆಹಲಿ: ‘ಭವಿಷ್ಯದಲ್ಲಿ ಇತರ ಸಮುದಾಯಗಳನ್ನು ಗುರಿಯಾಗಿಸಲು ವಕ್ಫ್‌ ತಿದ್ದುಪಡಿ ಮಸೂದೆ ಒಂದು ಮಾದರಿಯಾಗಿ ನಿಲ್ಲಲಿದೆ. ದೇಶದ ಕ್ರೈಸ್ತರ ಮೇಲೆ ತನ್ನ ದೃಷ್ಟಿ ತಿರುಗಿಸಲು ಆರ್‌ಎಸ್‌ಎಸ್‌ ಬಹಳ ಸಮಯ ತೆಗೆದುಕೊಂಡಿಲ್ಲ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶನಿವಾರ ಹೇಳಿದ್ದಾರೆ.

ADVERTISEMENT

ಆರ್‌ಎಸ್‌ಎಸ್‌ ಮುಖವಾಣಿ ‘ಆರ್ಗನೈಜರ್’ ನಿಯತಕಾಲಿಕೆ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದ್ದ ‘ಹೂ ಹ್ಯಾಸ್ ಮೋರ್‌ ಲ್ಯಾಂಡ್‌ ಇನ್‌ ಇಂಡಿಯಾ? ದಿ ಕ್ಯಾಥೋಲಿಕ್‌ ಚರ್ಚ್‌ ವರ್ಸಸ್ ವಕ್ಫ್‌ ಬೋರ್ಡ್‌ ಡಿಬೇಟ್‌’ ಎಂಬ ಲೇಖನ ಉಲ್ಲೇಖಿಸಿ, ರಾಹುಲ್‌ ಗಾಂಧಿ ಈ ಮಾತು ಹೇಳಿದ್ದಾರೆ.

ಈ ಲೇಖನದ ಆಧಾರದಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿ ಉಲ್ಲೇಖಿಸಿ, ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ರಾಹುಲ್‌,‘ವಕ್ಫ್‌ ತಿದ್ದುಪಡಿ ಮಸೂದೆ ಮುಸ್ಲಿಮರನ್ನು ಗುರಿಯಾಗಿಸುತ್ತದೆ ಎಂದು ನಾನು ಹೇಳಿದ್ದೆ. ಆದರೆ, ಈ ಮಸೂದೆ ಭವಿಷ್ಯದಲ್ಲಿ ಇತರ ಸಮುದಾಯಗಳನ್ನು ಗುರಿಯಾಗಿಸಲು ಒಂದು ಪೂರ್ವನಿದರ್ಶನವಾಗಲಿದೆ’ ಎಂದು ಹೇಳಿದ್ದಾರೆ.

ಏಪ್ರಿಲ್ 3ರಂದು ನಿಯತಕಾಲಿಕೆ ವೆಬ್‌ಸೈಟ್‌ನಲ್ಲಿ ಈ ಲೇಖನ ಪ್ರಕಟವಾಗಿತ್ತು. ಈಗ, ಆನ್‌ಲೈನ್‌ನಲ್ಲಿ ಈ ಲೇಖನ ಲಭ್ಯ ಇಲ್ಲ.

ಜಮೀನುಗಳ ಒಡೆತನಕ್ಕೆ ಸಂಬಂಧಿಸಿದ ವಾಸ್ತವ ದತ್ತಾಂಶಗಳ ಪ್ರಕಾರ, ದೇಶದಲ್ಲಿ ಕ್ಯಾಥೋಲಿಕ್‌ ಚರ್ಚ್‌ ಭಾರಿ ಪ್ರಮಾಣದ ಜಮೀನು ಹೊಂದಿದೆ. ವಕ್ಫ್‌ ಮಂಡಳಿಗಿಂತಲೂ ಅತಿ ಹೆಚ್ಚು ಜಮೀನನ್ನು ಚರ್ಚ್‌ ಹೊಂದಿದೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿತ್ತು.

ವಕ್ಫ್‌ ತಿದ್ದುಪಡಿ ಮಸೂದೆಗೆ ಕ್ಯಾಥೋಲಿಕ್‌ ಬಿಷಪ್ಸ್‌ ಕಾನ್ಫರೆನ್ಸ್‌ ಆಫ್‌ ಇಂಡಿಯಾ(ಸಿಬಿಸಿಐ) ಹಾಗೂ ಕೇರಳ ಕ್ಯಾಥೋಲಿಕ್ ಬಿಷಪ್ಸ್‌ ಕೌನ್ಸಿಲ್(ಕೆಸಿಬಿಸಿ) ಬೆಂಬಲ ಇದೆ ಎಂದು ಬಿಜೆಪಿ ಹೇಳುತ್ತಿದ್ದ ಸಂದರ್ಭದಲ್ಲಿಯೇ, ಆರ್‌ಎಸ್‌ಎಸ್‌ ಮುಖವಾಣಿಯಲ್ಲಿ ಲೇಖನ ಪ್ರಕಟವಾಗಿತ್ತು ಎಂಬುದು ಗಮನಾರ್ಹ.

ಅಲ್ಲದೇ, ‘ತಮ್ಮ ಜಮೀನನ್ನು ವಕ್ಫ್‌ ಮಂಡಳಿ ತನ್ನದೆಂದು ಹೇಳಿ, ನಮ್ಮನ್ನು ಒಕ್ಕೆಲೆಬ್ಬಿಸುತ್ತಿದೆ’ ಎಂದು ದೂರಿ ಕೇರಳದ ಮುನಂಬಮ್‌ನಲ್ಲಿ ಕ್ರೈಸ್ತ ಕುಟುಂಬಗಳು ಕಳೆದ ಕೆಲ ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದವು. ಈ ಹಿನ್ನೆಲೆಯಲ್ಲಿ, ವಕ್ಫ್‌ ತಿದ್ದುಪಡಿ ಮಸೂದೆಗೆ ಬೆಂಬಲಿಸುವಂತೆ ಬಿಜೆಪಿಯು ಸಂಸದರಿಗೆ ಮನವಿ ಮಾಡಿತ್ತು.

ನಮ್ಮ ಜನರನ್ನು ಇಂತಹ ದಾಳಿಗಳಿಂದ ಸಂವಿಧಾನ ಮಾತ್ರ ರಕ್ಷಿಸಬಲ್ಲದು. ಹೀಗಾಗಿ ಸಂವಿಧಾನ ರಕ್ಷಣೆ ನಮ್ಮೆಲ್ಲರ ಸಾಮೂಹಿಕ ಕರ್ತವ್ಯ 
ರಾಹುಲ್‌ ಗಾಂಧಿ ಕಾಂಗ್ರೆಸ್ ನಾಯಕ
ಕ್ಯಾಥೋಲಿಕ್ ಚರ್ಚ್‌ ಹೊಂದಿರುವ ಜಮೀನು ಕುರಿತ ಲೇಖನ ಆರ್‌ಎಸ್‌ಎಸ್‌ನ ಮನಸ್ಥಿತಿ ಹಾಗೂ ಅದು ಅನುಸರಿಸುವ ಬಹುಸಂಖ್ಯಾತರ ಕೋಮುವಾದ ತೋರಿಸುತ್ತದೆ
ಪಿಣರಾಯಿ ವಿಜಯನ್ ಕೇರಳ ಮುಖ್ಯಮಂತ್ರಿ

ಲೇಖನದಲ್ಲಿದ್ದ ಪ್ರಮುಖ ಅಂಶಗಳು

* ಕ್ಯಾಥೋಲಿಕ್‌ ಚರ್ಚ್ ಹಾಗೂ ಅದರ ಅಂಗಸಂಸ್ಥೆಗಳು ಅಂದಾಜು 7 ಕೋಟಿ ಹೆಕ್ಟೇರ್‌ ಜಮೀನು ಹೊಂದಿವೆ. ಈ ಜಮೀನುಗಳ ಮೌಲ್ಯ ಅಂದಾಜು ₹20 ಸಾವಿರ ಕೋಟಿ

* ಇಷ್ಟೊಂದು ಪ್ರಮಾಣದ ಜಮೀನು ಹೊಂದಿರುವ ಕ್ಯಾಥೋಲಿಕ್‌ ಚರ್ಚ್ ದೇಶದ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ಹೊಂದಿದೆ

* ತನ್ನ ಒಡೆತನದ ಜಮೀನುಗಳ ಕುರಿತಂತೆ ಸರ್ಕಾರದ ವೆಬ್‌ಸೈಟ್‌ನಲ್ಲಿ 2021ರ ಫೆಬ್ರುವರಿಯಲ್ಲಿ ಲಭ್ಯವಿದ್ದ ಪ್ರಕಾರ ಸರ್ಕಾರವು 15531 ಚದರ ಕಿ.ಮೀ.ನಷ್ಟು ಜಮೀನು ಹೊಂದಿದೆ. ಕ್ಯಾಥೋಲಿಕ್‌ ಚರ್ಚ್‌ ಹೊಂದಿರುವಷ್ಟು ಜಮೀನನ್ನು ವಕ್ಫ್‌ ಮಂಡಳಿ ಕೂಡ ಹೊಂದಿಲ್ಲ

* 2012ರ ಮಾಹಿತಿ ಪ್ರಕಾರ ಕ್ಯಾಥೋಲಿಕ್‌ ಚರ್ಚ್ 2457 ಆಸ್ಪತ್ರೆಗಳು 240 ಮೆಡಿಕಲ್‌/ನರ್ಸಿಂಗ್‌ ಕಾಲೇಜುಗಳು 28 ಕಾಲೇಜುಗಳು 5 ಎಂಜಿನಿಯರಿಂಗ್‌ ಕಾಲೇಜುಗಳು 3765 ಪ್ರೌಢಶಾಲೆಗಳು 7319 ಪ್ರಾಥಮಿಕ ಶಾಲೆಗಳು ಹಾಗೂ 3187 ನರ್ಸರಿ ಶಾಲೆಗಳನ್ನು ಹೊಂದಿವೆ

* ಬಹುತೇಕ ಜಮೀನನ್ನು ಬ್ರಿಟಿಷರ ಆಳ್ವಿಕೆಯಲ್ಲಿ ಪಡೆದಿರುವುದಾಗಿದೆ. ಚರ್ಚ್‌ಗೆ ಭಾರಿ ಪ್ರಮಾಣದ ಜಮೀನು ನೀಡುವುದಕ್ಕೆ ಅನುಕೂಲವಾಗಲು ಬ್ರಿಟಿಷ್‌ ಆಡಳಿತವು 1927ರಲ್ಲಿ ಭಾರತೀಯ ಚರ್ಚ್‌ ಕಾಯ್ದೆ ಅಂಗೀಕರಿಸಿತ್ತು

* ಬ್ರಿಟಿಷ್‌ ಸರ್ಕಾರವು ಯಾವುದೇ ಜಮೀನನ್ನು ಲೀಸ್‌ ಆಧಾರದಲ್ಲಿ ಮಂಜೂರು ಮಾಡಿದ್ದಲ್ಲಿ ಅಂತಹ ಜಮೀನನ್ನು ಚರ್ಚ್ ಸ್ವತ್ತು ಎಂಬುದಾಗಿ ಮಾನ್ಯ ಮಾಡಲಾಗುವುದಿಲ್ಲ ಎಂದು 1965ರಲ್ಲಿ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಆದರೆ ಈ ಸುತ್ತೋಲೆ ಮೂಲಕ ನೀಡಿದ್ದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಜಾರಿ ಮಾಡದ ಕಾರಣ ಚರ್ಚ್‌ ಒಡೆತನದ ಜಮೀನು ಕುರಿತ ಸಮಸ್ಯೆ ಇತ್ಯರ್ಥವಾಗದೇ ಉಳಿದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.