ವಾಂಕಾನೆರ್, ಗುಜರಾತ್: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರದಿಂದ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಸಾಧ್ಯವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರವಿದ್ದ ಸಂದರ್ಭ ಇದು ಸಾಧ್ಯವಾಗಲಿಲ್ಲ ಏಕೆ? ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಶ್ನಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನೆಯ ಮೂಲ ಸಮಸ್ಯೆಯಾಗಿದ್ದ ಆರ್ಟಿಕಲ್ 370 ಅನ್ನು ಈಗ ತೆಗೆದುಹಾಕಲಾಯಿತು ಎಂದರು.
ಮೊರ್ಬಿ ಜಿಲ್ಲೆಯ ವಾಂಕಾನೆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಜಿತು ಸೋಮನಿ ಅವರ ಪರವಾಗಿ ಪ್ರಚಾರ ನಡೆಸಿದ ಆದಿತ್ಯನಾಥ್, ಕಾಂಗ್ರೆಸ್ ವಿಸರ್ಜಿಸುವ ಮಹಾತ್ಮ ಗಾಂಧಿ ಅವರ ಕನಸನ್ನು ನನಸು ಮಾಡುವ ಸಮಯ ಬಂದಿದೆ ಎಂದರು. ಸೋಮನಿ ಅವರು ವಾಂಕಾನೆರ್ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಗುಜರಾತ್ನಂತೆ ಉತ್ತರ ಪ್ರದೇಶವೂ ಪ್ರಧಾನಿ ಮೋದಿ ಅವರ ಸಲಹೆಯನ್ನು ಪಡೆಯುತ್ತಿದೆ. ಅದರ ಫಲಿತಾಂಶವು ನಿಮ್ಮ ಮುಂದಿದೆ. ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಭವ್ಯ ರಾಮ ಮಂದಿರವನ್ನು ನೀವು ಕಣ್ತುಂಬಿಕೊಳ್ಳಬೇಕು. ವಾರಾಣಸಿಯಲ್ಲಿರುವ ಕಾಶಿ ವಿಶ್ವನಾಥ ಧಾಮವು ಅದ್ಭುತವಾಗಿ ಕಾಣಿಸುತ್ತಿದೆ. ಈಗ ಸಂಪೂರ್ಣ ಬದಲಾಗಿದೆ. ಹಾಗಾಗಿಯೇ ನಾವು 'ಮೋದಿ ಹೈ ತೋ ಮುಮ್ಕಿನ್ ಹೈ' (ಮೋದಿ ಇದ್ದರೆ ಎಲ್ಲವೂ ಸಾಧ್ಯ) ಎಂದು ಹೇಳುವುದು ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿತ್ತೆ? ಅಥವಾ ಕಾಶಿ ವಿಶ್ವನಾಥ ದೇವಸ್ಥಾನವು ಅದ್ಭುತವಾಗಿ ಬದಲಾಗುತ್ತಿತ್ತೆ? ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದನೆಯ ಮೂಲ ಸಮಸ್ಯೆಯಾಗಿದ್ದ ಆರ್ಟಿಕಲ್ 370 ಅನ್ನು ತೆಗೆದುಹಾಕಲು ಸಾಧ್ಯವಾಗುತ್ತಿತ್ತೆ? ಎಂದು ನೆರೆದಿದ್ದವರನ್ನು ಉದ್ದೇಶಿಸಿ ಯೋಗಿ ಆದಿತ್ಯನಾಥ್ ಪ್ರಶ್ನಿಸಿದರು. ಹೆಚ್ಚಿನವರು 'ಇಲ್ಲ' ಎಂದು ಗಟ್ಟಿಯಾಗಿ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.