ರೈಲು ಬರುವುದಕ್ಕೆ ಕೆಲವೇ ಸೆಕೆಂಡುಗಳಿದ್ದಾಗ, ಹಳಿಯಲ್ಲಿ ಸಿಲುಕಿದ್ದ ಪ್ರಯಾಣಿಕನೊಬ್ಬನನ್ನು ರೈಲ್ವೆ ಸಿಬ್ಬಂದಿಯೊಬ್ಬರು ಸಿನಿಮೀಯ ರೀತಿಯಲ್ಲಿ ಕಾಪಾಡಿರುವ ಪ್ರಕರಣ ಪಶ್ಚಿಮ ಬಂಗಾಳದ ಬಾಲಿಛಕ್ ನಗರದ ರೈಲು ನಿಲ್ದಾಣದಲ್ಲಿ ವರದಿಯಾಗಿದೆ.
ಪ್ಲಾಟ್ಫಾರ್ಮ್ ಮೇಲೆ ನಿಂತಿದ್ದ ರೈಲ್ವೆ ಸಿಬ್ಬಂದಿ ಎಚ್. ಸತೀಶ್ ಕುಮಾರ್ ಎನ್ನುವವರು, ರೈಲು ಬರುವುದಕ್ಕೆ ಕೆಲವೇ ಸೆಕೆಂಡುಗಳು ಇದ್ದಾಗ, ಹಳಿಯಲ್ಲಿ ಪ್ರಯಾಣಿಕ ಸಿಲುಕಿರುವುದನ್ನು ಗಮನಿಸುತ್ತಾರೆ. ತಕ್ಷಣವೇ, ಆತನತ್ತ ಓಡುವ ಸತೀಶ್, ಹಳಿ ಮೇಲೆ ಜಿಗಿದು, ವ್ಯಕ್ತಿಯನ್ನು ಪಕ್ಕಕ್ಕೆ ಎಳೆದೊಯ್ಯುತ್ತಾರೆ. ಇಷ್ಟಾಗುವುದರೊಳಗೆ ರೈಲು ನಿಲ್ದಾಣದಲ್ಲಿ ಹಾದುಹೋಗುತ್ತದೆ.
ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರೈಲ್ವೆ ಇಲಾಖೆಯು ಫೇಸ್ಬುಕ್ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದೆ. ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ಸಾಹಸ ಕಂಡು ನೆಟ್ಟಿಗರು ಶಹಬ್ಬಾಸ್ ಹೇಳಿದ್ದಾರೆ.
ಗುರುವಾರವಷ್ಟೇ ಹಂಚಿಕೆಯಾಗಿರುವ 24 ಸೆಕೆಂಡುಗಳ ಈ ವಿಡಿಯೊವನ್ನು ಇದುವರೆಗೆ 6.6 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 26 ಸಾವಿರ ಮಂದಿ ಮೆಚ್ಚಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.