ಪ್ರಿಯಾಂಕಾ ಗಾಂಧಿ ವಾದ್ರಾ
-ಪಿಟಿಐ ಚಿತ್ರ
ತಿರುವನಂತಪುರ: ಕಳೆದ ವರ್ಷ ಕೇರಳದ ವಯನಾಡಿನಲ್ಲಿ ಸಂಭವಿಸಿದ್ದ ಭೂಕುಸಿತದಿಂದ ಸಂತ್ರಸ್ತರಾಗಿರುವ ಜನರ ಸಾಲ ಮನ್ನಾ ಮಾಡದ ಕೇಂದ್ರ ಸರ್ಕಾರವು ದ್ರೋಹ ಬಗೆದಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು (ಗುರುವಾರ) ಆರೋಪಿಸಿದ್ದಾರೆ.
‘ಆರ್ಬಿಐ ಮಾರ್ಗದರ್ಶಿ ಸೂತ್ರಗಳ ಅನುಸಾರ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಸಾಲದ ಅವಧಿಯನ್ನು ಮರುಹೊಂದಾಣಿಕೆ ಮಾಡಬಹುದಷ್ಟೆ’ ಎಂದು ಕೇಂದ್ರ ಸರ್ಕಾರ, ಕೇರಳ ಹೈಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದೆ ಎಂಬುದನ್ನು ಉಲ್ಲೇಖಿಸಿ ಈ ಮಾತು ಹೇಳಿದರು.
'ವಯನಾಡಿನ ಭೂಕುಸಿತದ ಸಂತ್ರಸ್ತರು ಮನೆಗಳು, ಜಮೀನು ಸೇರಿದಂತೆ ಜೀವನೋಪಾಯದ ಎಲ್ಲವನ್ನು ಕಳೆದುಕೊಂಡಿದ್ದಾರೆ. ಆದರೂ ಕೇಂದ್ರವು ಸಾಲ ಮನ್ನಾ ಮಾಡಲು ನಿರಾಕರಿಸುತ್ತಿದೆ. ಬದಲಾಗಿ ಸಾಲ ಮರು ಹೊಂದಾಣಿಕೆಗೆ ಅವಕಾಶ ನೀಡುತ್ತಿದೆ. ಇದು ಪರಿಹಾರವಲ್ಲ, ದ್ರೋಹ' ಎಂದು ಹೇಳಿದ್ದಾರೆ.
'ಕೇಂದ್ರದ ಈ ನಿಲುವನ್ನು ಬಲವಾಗಿ ಖಂಡಿಸುತ್ತೇವೆ. ವಯನಾಡಿನ ಸಹೋದರ ಸಹೋದರಿಯರಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ. ಅವರ ನೋವಿಗೆ ದನಿಯಾಗಿ ನ್ಯಾಯ ಸಿಗುವವರೆಗೂ ಪ್ರತಿಯೊಂದು ವೇದಿಕೆಯಲ್ಲೂ ಹೋರಾಟ ನಡೆಸಲಾಗುವುದು' ಎಂದು ಪ್ರಿಯಾಂಕಾ ತಿಳಿಸಿದ್ದಾರೆ.
ಕಳೆದ ವರ್ಷ ಜುಲೈ 30ರಂದು ವಯನಾಡಿನಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರಲ್ಲದೆ ನೂರೂರು ಮಂದಿ ಗಾಯಗೊಂಡಿದ್ದರು. ಈ ದುರಂತದಲ್ಲಿ 32 ಮಂದಿ ನಾಪತ್ತೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.