ADVERTISEMENT

ವಯನಾಡು ಪುನರ್‌ವಸತಿ: ಎಡರಂಗಕ್ಕೆ ಶಕ್ತಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 15:48 IST
Last Updated 1 ಮಾರ್ಚ್ 2026, 15:48 IST
ಭಾನುವಾರ ವಯನಾಡಿನಲ್ಲಿ ಪುನರ್‌ವಸತಿ ಯೋಜನೆಯಡಿ ಮನೆಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪಾಲ್ಗೊಂಡಿದ್ದರು
ಭಾನುವಾರ ವಯನಾಡಿನಲ್ಲಿ ಪುನರ್‌ವಸತಿ ಯೋಜನೆಯಡಿ ಮನೆಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪಾಲ್ಗೊಂಡಿದ್ದರು   

ತಿರುವನಂತಪುರ: 2024ರ ಭಾರಿ ಭೂಕುಸಿತದಿಂದ ತತ್ತರಿಸಿದ್ದ ವಯನಾಡಿನ ಸಂತ್ರಸ್ತರಿಗೆ ಕೇರಳದ ಎಲ್‌ಡಿಎಫ್‌ ಸರ್ಕಾರ ( ಎಡ ಪ್ರಜಾಸತ್ತಾತ್ಮಕ ರಂಗ) ಪುನರ್ವಸತಿ ಭಾಗವಾಗಿ ಕಲ್‌ಪೆಟ್ಟದಲ್ಲಿ ನಿರ್ಮಿಸಿದ್ದ 178 ಮನೆಗಳನ್ನು ಹಸ್ತಾಂತರ ಮಾಡಿತು.

ಚುನಾವಣೆ ಹೊಸ್ತಿಲಲ್ಲಿರುವ ಕೇರಳದಲ್ಲಿ ಆಡಳಿತಾರೂಢ ಎಲ್‌ಡಿಎಫ್‌ ಸರ್ಕಾರ ತನ್ನ ಸಾಧನೆಗಳನ್ನು ಹೇಳಿಕೊಳ್ಳಲು ವಯನಾಡು ಪುನರ್‌ ವಸತಿ ಯೋಜನೆ ಅವಕಾಶ ನೀಡಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಭಾನುವಾರ ಸಂತ್ರಸ್ತರಿಗೆ ಮನೆಗಳ ಕೀಲಿಕೈ ಮತ್ತು ಭೂಮಿಯ ಹಕ್ಕುಪತ್ರವನ್ನು ವಿತರಣೆ ಮಾಡಿದರು.

ADVERTISEMENT

ಆನಂತರ ಮಾತನಾಡಿದ ಅವರು ‘ಕೇಂದ್ರದ ಬಾಕಿ ಪರಿಹಾರ ನಿರಾಕರಣೆ, ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿ ಕುರಿತ ಅಪಪ್ರಚಾರದ ಮಧ್ಯೆಯೂ ಸರ್ಕಾರ ಪುನರ್‌ ವಸತಿ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ’ ಎಂದರು.

2024ರಲ್ಲಿ ಮುಂಡಕ್ಕೈ–ಚೂರಲ್‌ಮಾಲ ನಡುವೆ ಭಾರಿ ಭೂಕುಸಿತ ಉಂಟಾಗಿ 350ಕ್ಕೂ ಹೆಚ್ಚು ಮನೆ ಕೊಚ್ಚಿಹೋಗಿದ್ದವು. ಸರ್ಕಾರ 64 ಎಕರೆ ಪ್ರದೇಶದಲ್ಲಿ ₹ 351 ಕೋಟಿ ವೆಚ್ಚದಲ್ಲಿ 400ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸುತ್ತಿದೆ. ಮುಂದಿನ ಮಳೆಗಾಲದ ವೇಳೆಗೆ ಉಳಿದ ಮನೆ ಸಿದ್ಧವಾಗಲಿವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಭೂಕುಸಿತ ಪರಿಹಾರಕ್ಕಾಗಿ ಮುಖ್ಯಮಂತ್ರಿ ವಿಕೋಪ ಪರಿಹಾರ ನಿಧಿಗೆ ವಯನಾಡಿನ ಕಾಂಗ್ರೆಸ್ ಸಂಸದೆ ಪ್ರಿಯಾಂಕ ಗಾಂಧಿ ಕೊಡುಗೆ ನೀಡಿಲ್ಲ ಎಂದು ಸಿಪಿಎಂ ಇತ್ತೀಚೆಗಷ್ಟೆ ಟೀಕಿಸಿತ್ತು.

ಕಾಂಗ್ರೆಸ್‌ ಮತ್ತು ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ ತಲಾ 100 ಮನೆಗಳನ್ನು ನಿರ್ಮಿಸಿಕೊಡುತ್ತಿವೆ.

ಕಾಂಗ್ರೆಸ್ ಶಾಸಕರ ವಿರುದ್ಧ ಘೋಷಣೆ:

ಭಾನುವಾರ ನಡೆದ ಮೊದಲ ಹಂತದ ಮನೆಗಳ ವಿತರಣೆ ಕಾರ್ಯಕ್ರಮದಲ್ಲಿ ಕಲ್‌ಪೆಟ್ಟದ ಕಾಂಗ್ರೆಸ್‌ ಶಾಸಕ ಸಿದ್ದಿಕಿ ಅವರು ಮಾತನಾಡುತ್ತಿದ್ದ ವೇಳೆ ಸಿಪಿಎಂ ಬೆಂಬಲಿಗರು ಎನ್ನಲಾದ ಕೆಲವರು ಅಡ್ಡಿಪಡಿಸಿ, ಘೋಷಣೆಗಳನ್ನು ಕೂಗಿದರು.

ಮನೆಗಳ ನಿರ್ಮಾಣಕ್ಕೆ ನೆರವು ನೀಡಿದ್ದರೂ ಸ್ಥಳೀಯ ಶಾಸಕರಿಗೆ ಸಿಪಿಎಂ ಅಪಮಾನ ಮಾಡಿದೆ. ಮುಖ್ಯಮಂತ್ರಿ ಕೂಡಲೇ ಕ್ಷಮೆ ಕೇಳಬೇಕು ಎಂದು ವಿಪಕ್ಷ ನಾಯಕ, ಕಾಂಗ್ರೆಸ್‌ ಮುಖಂಡ ವಿ.ಡಿ.ಸತೀಶನ್‌ ಆಗ್ರಹಿಸಿದರು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.