ಕೋಲ್ಕತ್ತ: ‘ಕೋವಿಡ್–19 ಪಿಡುಗು ಇಲ್ಲವಾಗಿದೆ. ಆದರೆ, ಚುನಾವಣೆ ಕಾರಣದಿಂದಾಗಿ ಬಿಜೆಪಿಯ ಸಾರ್ವಜನಿಕ ಸಭೆಗಳನ್ನು ತಡೆಯುವ ಉದ್ದೇಶದಿಂದ ರಾಜ್ಯದಲ್ಲಿ ಲಾಕ್ಡೌನ್ ಹಾಗೂ ಇತರೆ ನಿರ್ಬಂಧಗಳನ್ನುಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಧಿಸುತ್ತಿದ್ದಾರೆ’ ಎಂದು ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಪ್ರತಿಪಾದಿಸಿದ್ದಾರೆ.
ದೇಶದಲ್ಲಿ ಕೋವಿಡ್–19 ಪ್ರತಿನಿತ್ಯದ ಪ್ರಕರಣಗಳ ಸಂಖ್ಯೆ 95 ಸಾವಿರ ಹಾಗೂ ಪಶ್ಚಿಮ ಬಂಗಾಳದಲ್ಲಿ 3 ಸಾವಿರ ದಾಖಲಾಗಿರುವ ಸಂದರ್ಭದಲ್ಲೇ ಘೋಷ್ ಅವರು ಈ ಹೇಳಿಕೆ ನೀಡಿದ್ದಾರೆ. ಬುಧವಾರ ಹೂಗ್ಲಿ ಜಿಲ್ಲೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪರಸ್ಪರ ಅಂತರವನ್ನು ಕಾಯ್ದುಕೊಳ್ಳದೇಸಾವಿರಾರು ಜನರು ಭಾಗವಹಿಸಿದ್ದು, ಈ ವೇಳೆ ಘೋಷ್ ಅವರು ಮಾತನಾಡಿರುವ ವಿಡಿಯೊ ಇದೀಗ ವೈರಲ್ ಆಗಿದೆ.
‘ದೀದಿಯ ಬೆಂಬಲಿಗರು, ಈ ಸಭೆಯಲ್ಲಿ ಸೇರಿರುವ ಜನರನ್ನು ನೋಡಿ ದಂಗಾಗಿದೆ. ಕೊರೊನಾ ಮುಗಿದ ಅಧ್ಯಾಯ. ಕೊರೊನಾ ವೈರಸ್ ಭಯದಿಂದ ಅಲ್ಲ, ಬಿಜೆಪಿಯ ಭಯದಿಂದಾಗಿ ದೀದಿ ಅನಗತ್ಯವಾಗಿ ಲಾಕ್ಡೌನ್ ಹೇರುತ್ತಿದ್ದಾರೆ’ ಎಂದು ಘೋಷ್ ಸಭೆಯಲ್ಲಿ ಉಲ್ಲೇಖಿಸಿದ್ದರು.
ಘೋಷ್ ಅವರ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್(ಟಿಎಂಸಿ) ಟೀಕಿಸಿದ್ದು, ‘ಪ್ರತಿನಿತ್ಯ ರಾಜ್ಯದಲ್ಲಿ ಮೂರು ಸಾವಿರಕ್ಕೂ ಅಧಿಕ ಕೋವಿಡ್–19 ಪ್ರಕರಣಗಳು ದಾಖಲಾಗುತ್ತಿದ್ದು, ಇಂಥ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರು ಈ ರೀತಿಯ ಹಾಸ್ಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ಚಿಕಿತ್ಸೆಗಾಗಿ ಯಾವುದಾದರೂ ವೈದ್ಯರ ಬಳಿ ಹೋಗಲಿ’ ಎಂದು ಟಿಎಂಸಿ ಸಂಸದ ಕಲ್ಯಾಣ್ ಬಂಡೋಪಾಧ್ಯಾಯ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.