ಕೋಲ್ಕತ್ತ: ಇಲ್ಲಿನ ಜಾಧವ್ಪುರ್ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯಪಾಲ ಜಗದೀಪ್ ಧನಕರ್ ಅವರು ಬರುತ್ತಿದ್ದಾಗ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ಪ್ರತಿಭಟನಕಾರರು ದಾರಿಯಲ್ಲೇ ತಡೆದ ಘಟನೆ ಮಂಗಳವಾರ ಕೋಲ್ಕತ್ತದಲ್ಲಿ ನಡೆದಿದೆ.
ಕಾಯ್ದೆ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು ಕಪ್ಪುಧ್ವಜಗಳನ್ನು ಪ್ರದರ್ಶಿಸಿ, ರಾಜ್ಯಪಾಲರು ವಿಶ್ವವಿದ್ಯಾಲಯಕ್ಕೆ ಪ್ರವೇಶಿಸದಂತೆ ತಡೆಯೊಡ್ದಿ, ಹಿಂತಿರುಗುವಂತೆ ಆಗ್ರಹಿಸಿದರು.
ಜಾಧವ್ಪುರ್ ವಿಶ್ವವಿದ್ಯಾಲಯ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ಪ್ರತಿಭಟನೆಯ ಕೇಂದ್ರವಾಗಿದ್ದು, ರಾಜ್ಯಪಾಲರು ಘಟಿಕೋತ್ಸವಕ್ಕೆ ಪಾಲ್ಗೊಳ್ಳಲು ಬರುತ್ತಿದ್ದಾಗ ಸುಮಾರು 50 ಪ್ರತಿಭಟನಕಾರರು ಅವರ ಮಾರ್ಗಕ್ಕೆ ತಡೆಯೊಡಿದ್ದರು. ಪ್ರತಿಭಟನಕಾರರನ್ನು ಶಿಕ್ಷಾ ಬಂಧು ಸಮಿತಿಯ ಸದಸ್ಯರು ಎಂದು ಹೇಳಲಾಗಿದ್ದು, ಸಮಿತಿಯು ಟಿಎಂಸಿಯ ಕಾರ್ಮಿಕ ಸಂಘಟನೆಗಳ ಅಂಗಸಂಸ್ಥೆಯಾಗಿದೆ ಎನ್ನಲಾಗಿದೆ.
ಸೋಮವಾರ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ರಾಜ್ಯಪಾಲರಿಗೆ ವಿದ್ಯಾರ್ಥಿಗಳು ಕಪ್ಪುಬಾವುಟ ಪ್ರದರ್ಶಿಸಿದ್ದರು. ಮಂಗಳವಾರ ರಾಜ್ಯಪಾಲರ ಅನುಪಸ್ಥಿತಿಯಲ್ಲೇ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮ ನಡೆಯಿತು.ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆಗಳ ಕುರಿತು ರಾಜ್ಯಪಾಲರು ತಮ್ಮ ಸರಣಿ ಟ್ವೀಟ್ಗಳಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ.ಪಶ್ಚಿಮ ಬಂಗಾಳ ಸರ್ಕಾರವು ಇತ್ತೀಚೆಗೆ ವಿಶ್ವವಿದ್ಯಾಲಯಗಳ ಕುಲಾಧಿಪತಿಯಾಗಿರುವ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.