ADVERTISEMENT

ಬೇಡಿಕೆ ಈಡೇರದಿದ್ದಲ್ಲಿ ದೇಶವ್ಯಾಪಿ 40 ಲಕ್ಷ ಟ್ರ್ಯಾಕ್ಟರ್‌ ರ‍್ಯಾಲಿ: ಟಿಕಾಯತ್

ಏಜೆನ್ಸೀಸ್
Published 3 ಫೆಬ್ರುವರಿ 2021, 4:42 IST
Last Updated 3 ಫೆಬ್ರುವರಿ 2021, 4:42 IST
ರೈತ ಮುಖಂಡ ರಾಕೇಶ್ ಟಿಕಾಯತ್
ರೈತ ಮುಖಂಡ ರಾಕೇಶ್ ಟಿಕಾಯತ್   

ನವದೆಹಲಿ: ನಾವು ಅಕ್ಟೋಬರ್ ವರೆಗೆ ಸಮಯ ನೀಡಿದ್ದು, ನಮ್ಮ ಮಾತನ್ನು ಆಲಿಸದಿದ್ದರೆ ದೇಶವ್ಯಾಪಿ 40 ಲಕ್ಷ ಟ್ರ್ಯಾಕ್ಟರ್‌ಗಳ ರ‍್ಯಾಲಿ ನಡೆಸಲಿದ್ದೇವೆ ಎಂದು ಕೇಂದ್ರ ಸರ್ಕಾರಕ್ಕೆ ರೈತ ಮುಖಂಡ ರಾಕೇಶ್ ಟಿಕಾಯತ್ ಎಚ್ಚರಿಕೆ ರವಾನಿಸಿದ್ದಾರೆ.

ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನವೆಂಬರ್ 26ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದುವರೆಗೆ ಕೇಂದ್ರ ಸರ್ಕಾರದೊಂದಿಗೆ ಹಲವು ಸುತ್ತಿನ ಮಾತುಕತೆಗಳು ನಡೆದರೂ ಯಾವುದೇ ಪ್ರಯೋಜನವುಂಟಾಗಲಿಲ್ಲ.

ಈ ನಡುವೆ ಜನವರಿ 26 ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಭಾರಿ ಹಿಂಸಾಚಾರ ನಡೆದಿತ್ತು. ಇದರಿಂದಾಗಿ ದೆಹಲಿ ಪ್ರತಿಭಟನಾ ಸ್ಥಳಗಳಲ್ಲಿ ಬಿಗು ಪೊಲೀಸ್ಬಂದೋಬಸ್ತ್ಏರ್ಪಡಿಸಿರುವ ಸರ್ಕಾರವು, ಅಂತರ್ಜಾಲ ಸೇವೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸಿತ್ತು.

ಈ ಎಲ್ಲ ಸವಾಲುಗಳನ್ನು ನೆಟ್ಟಿ ನಿಂತು ಪ್ರತಿಭಟನೆಯನ್ನು ಮುಂದುವರಿಸಿರುವ ರೈತರು ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂಜರಿಯುವುದಿಲ್ಲ ಎಂಬ ಅಚಲ ನಿರ್ಧಾರವನ್ನು ಕೈಗೊಂಡಿತ್ತು. ಅಲ್ಲದೆ ಸರ್ಕಾರದ ಜೊತೆಗೆ ಮಾತುಕತೆ ಮುಂದುವರಿಸಲು ಸಿದ್ಧ ಎಂದು ಹೇಳಿಕೊಂಡಿತ್ತು.

ಏತನ್ಮಧ್ಯೆ ಸರ್ಕಾರಕ್ಕೆ ಅಕ್ಟೋಬರ್ ವರೆಗೆ ಸಮಯ ನೀಡಿದ್ದೇವೆ ಎಂದು ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ಮುಖಂಡ ಹಾಗೂ ವಕ್ತಾರ ರಾಕೇಶ್ ಟಿಕಾಯತ್ ಹೇಳಿಕೆ ನೀಡಿದ್ದಾರೆ.

ಹಾಗೊಂದು ವೇಳೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ದೇಶವ್ಯಾಪ್ತಿ 40 ಲಕ್ಷ ಟ್ರ್ಯಾಕ್ಟರ್‌ಗಳ ರ‍್ಯಾಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಕಾನೂನು ಹಿಂತೆಗೆದುಕೊಳ್ಳದಿದ್ದರೆ ಮನೆಗೆ ಹಿಂತಿರುಗುವುದಿಲ್ಲ ಎಂಬುದು ನಮ್ಮ ಘೋಷಣೆಯಾಗಿದೆ. ಈ ಆಂದೋಲನವು ಅಕ್ಟೋಬರ್‌ನೊಳಗೆ ಮುಗಿಯುವುದಿಲ್ಲ. ಶೀಘ್ರದಲ್ಲೇ ಕೊನೆಗೊಳ್ಳುವುದಿಲ್ಲ ಎಂದವರು ಹೇಳಿದರು.

ಈ ಕುರಿತು ಸ್ಪಷ್ಟನೆ ಹಾಗೂ ಸಂಪೂರ್ಣ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.