ಕೋಲ್ಕತಾ: ತೊಂದರೆ ಸೃಷ್ಟಿಸುವ ಜನರಿಗೆ ನಮ್ಮ ಅನುಮತಿ ಇದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ‘ತೃಣಮೂಲ ಕಾಂಗ್ರೆಸ್ ಪಕ್ಷದವರು ತೊಂದರೆ ಸೃಷ್ಟಿಸುತ್ತಾರೆ. ನಾವು ಸಹ ತೊಂದರೆ ಹುಟ್ಟುಹಾಕುತ್ತೇವೆ. ಇದು ಬಂಗಾಳ ರಾಜಕಾರಣದ ಮೂಲ ಗುಣ. ನಾವು ಎಲ್ಲದಕ್ಕೂ ಸಿದ್ಧರಾಗಿದ್ದೇವೆ. ಪತ್ರಕರ್ತರು ಸುದ್ದಿಗಾಗಿ ಕಾಯುತ್ತಿರುತ್ತಾರೆ. ಆ ಕಾರಣಕ್ಕಾಗಿ ತೊಂದರೆ ಸೃಷ್ಟಿಸುವ ಜನರಿಗೆ ನಮ್ಮ ಅನುಮತಿ ಇದೆ’ಎಂದು ತಿಳಿಸುವ ಮೂಲಕ ವಿವಾದಕ್ಕೆ ಗ್ರಾಸವಾಗಿದ್ದಾರೆ.
ದಿಲೀಪ್ ಘೋಷ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ತೃಣಮೂಲ ಕಾಂಗ್ರೆಸ್ ಮುಖಂಡ ತಪಸ್ ರಾಯ್ ಅವರು, ’ಎಲ್ಲ ರಾಜ್ಯಗಳ ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಬಂಗಾಳದ ಮೇಲೆ ಹಿಡಿತ ಸಾಧಿಸಲು ಬಿಜೆಪಿಯವರು ಹಿಂಸೆಯನ್ನು ಹುಟ್ಟುಹಾಕುತ್ತಿದ್ದಾರೆ. ದಿಲೀಪ್ ಘೋಷ್ ಅವರಿಗೆ ಬಂಗಾಳ ರಾಜಕೀಯ ಸಂಸ್ಕೃತಿಯ ಬಗ್ಗೆ ಅರಿವಿಲ್ಲ‘ ಎಂದು ಹರಿಹಾಯ್ದಿದ್ದಾರೆ.
ದಿಲೀಪ್ ಘೋಷ್ ಮೂರ್ಖರಂತೆ ಮಾತನಾಡುತ್ತಿದ್ದಾರೆ ಎಂದಿರುವ ಸಿಪಿಎಂ ನಾಯಕ ಸುಜನ್ ಚಕ್ರವರ್ತಿ ಅವರು, ‘ಜನರಲ್ಲಿ ಉನ್ಮಾದ ಹುಟ್ಟುಹಾಕಲು ಘೋಷ್ ಅವರು ಮೂರ್ಖರಂತೆ ಹೇಳಿಕೆ ನೀಡುತ್ತಿದ್ದಾರೆ. ಇಂತಹ ರಾಜಕೀಯವನ್ನು ಒಪ್ಪಿಕೊಳ್ಳಲಾಗುವುದಿಲ್ಲ’ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.