ನವದೆಹಲಿ: ‘ಹಿಂದಿನವರ ಮಾರ್ಗದಲ್ಲಿ ಮತ್ತು ಅದೇ ಯೋಚನೆಯಲ್ಲಿಯೇ’ ನಾವೂ ಕೆಲಸ ಮಾಡಿದ್ದರೆ, 370 ವಿಧಿ ರದ್ಧತಿ, ರಾಮಜನ್ಮ ಭೂಮಿ ವಿವಾದ ಇತ್ಯರ್ಥ ಹಾಗೂ ತ್ರಿವಳಿ ತಲಾಖ್ ನಿಷೇಧ ಸಾಧ್ಯವಾಗುತ್ತಿರಲಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು.
ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಿದರು. ‘ರಾಷ್ಟ್ರಪತಿ ಅವರು ತಮ್ಮ ಭಾಷಣದಲ್ಲಿ ನವಭಾರತದ ದೃಷ್ಟಿಕೋನಗಳ ಬಗ್ಗೆ ಉಲ್ಲೇಖಿಸಿದರು. ಶತಮಾನದ ಮೂರನೇ ದಶಕಕ್ಕೆ ಕಾಲಿಟ್ಟ ಈ ಸಂದರ್ಭದಲ್ಲಿ ಅವರು ಮಾತನಾಡಿದ್ದಾರೆ. ಅವರು ಈ ಮಾತುಗಳು ಭರವಸೆಮೂಡಿಸುತ್ತದೆ ಮತ್ತು ದೇಶ ಮುನ್ನಡೆಸುವ ಮಾರ್ಗಸೂಚಿಯಾಗಿದೆ’ ಎಂದರು.
‘ಈ ದೇಶದ ಜನರು ಸರ್ಕಾರವನ್ನಷ್ಟೇ ಬದಲಿಸಲಿಲ್ಲ.ಯೋಚನೆಯಲ್ಲೂ ಬದಲಾವಣೆಬಯಸಿದ್ದರು. ನಾವೂ ಹಿಂದಿನಂತೆಯೇ ಕೆಲಸ ಮಾಡಿದಿದ್ದರೆ, 370ನೇ ವಿಧಿ ರದ್ದತಿ ಇತಿಹಾಸವಾಗುತ್ತಿರಲಿಲ್ಲ. ತ್ರಿವಳಿ ತಲಾಖ್ನಿಂದ ಮುಸ್ಲಿಂ ಮಹಿಳೆಯರು ಇನ್ನೂ ಮರುಗುತ್ತಿರುತ್ತಿದ್ದರು. ರಾಮ ಜನ್ಮ ಭೂಮಿ ವಿವಾದ ಇತ್ಯರ್ಥವಾಗುತ್ತಲೇ ಇರಲಿಲ್ಲ. ಕರ್ತಾರ್ಪುರ ಸಾಹಿಬ್ ಕಾರಿಡಾರ್ ನನಸಾಗುತ್ತಿರಲಿಲ್ಲ. ಇಂಡೊ–ಬಾಂಗ್ಲಾ ಭೂ ಒಪ್ಪಂದವೂ ಏರ್ಪಡುತ್ತಿರಲಿಲ್ಲ’ ಎಂದು ಹೇಳಿದರು.
‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ತರುವ ಅನಿವಾರ್ಯ ಏನಿತ್ತು? ಹಿಂದೂ ಮುಸ್ಲಿಂ ನಡುವೆ ಒಡಕು ಉಂಟು ಮಾಡುತ್ತಿದ್ದೀರಾ ಎಂದು ನಮ್ಮ ಮೇಲೆ ಆರೋಪಿಸುತ್ತಿದ್ದಾರೆ. ಭಾರತದ ಮುಸ್ಲಿಮರನ್ನು ಪ್ರಚೋದಿಸಿ ಪಾಕಿಸ್ತಾನ ಸೋತಿದೆ. ಈಗ ವಿರೋಧ ಪಕ್ಷಗಳು ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಿವೆ’ ಎಂದು ಟೀಕಿಸಿದರು.
‘ಸಿಕ್ಕಿಂ ಸಾವಯವ ರಾಜ್ಯವಾಗಿ ಉಳಿದ ರಾಜ್ಯಗಳಿಗೆ ಪ್ರೇರಣೆಯಾಗಿದೆ. ಕಾರ್ಬನ್ ನ್ಯೂಟ್ರಲ್ ದೇಶ ಎನಿಸಿರುವ ಭೂತನ್ ಮಾದರಿಯಲ್ಲಿ ಲಡಾಖ್ ಅನ್ನು ರೂಪಿಸಲಾಗುತ್ತಿದ್ದು, ದೇಶಕ್ಕೆ ಮಾದರಿಯಾಗಲಿದೆ’ ಎಂದರು.
‘ಆರು ತಿಂಗಳಿನಲ್ಲಿ ಪ್ರಧಾನಿಗೆ ಜನತೆ ದೊಣ್ಣೆಯಲ್ಲಿ ಹೊಡೆಯುವ ಸ್ಥಿತಿ ಎದುರಾಗಲಿದೆ’ ಎಂದಿದ್ದ ರಾಹುಲ್ ಗಾಂಧಿಗೆ ಸಂಸತ್ತಿನಲ್ಲಿ ಉತ್ತರಿಸಿದ ಮೋದಿ, ‘ಯುವಜನತೆ ಮೋದಿಗೆಹೊಡೆಯುತ್ತಾರೆ ಎಂದು ರಾಹುಲ್ ಹೇಳಿದ್ದಾರೆ. ಹಾಗಾದರೆನಾನು ನನ್ನ ಸೂರ್ಯ ನಮಸ್ಕಾರ ಅವಧಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತೇನೆ.ಇದರಿಂದ ನನ್ನ ಬೆನ್ನು ಇನ್ನಷ್ಟು ಗಟ್ಟಿಗೊಳ್ಳಲಿದ್ದು, ಎಲ್ಲಾ ರೀತಿಯ ಪೆಟ್ಟುಗಳನ್ನು ತಿನ್ನಬಹುದು’ ಎಂದು ಕಿಚಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.