ADVERTISEMENT

ರಾಜಕೀಯ ಪಕ್ಷದ 2 ಬಣಗಳ ಘರ್ಷಣೆ; ಕಾರ್ಯಾಚರಣೆಯಲ್ಲಿದ್ದ ಕಾನ್‌ಸ್ಟೆಬಲ್‌ಗೆ ಗುಂಡೇಟು

ಪಿಟಿಐ
Published 22 ನವೆಂಬರ್ 2022, 12:51 IST
Last Updated 22 ನವೆಂಬರ್ 2022, 12:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ರಾಜಕೀಯ ಪಕ್ಷವೊಂದರ ಎರಡು ಬಣಗಳ ನಡುವೆ ನಡೆದ ಘರ್ಷಣೆ ತಡೆಯಲು ಪ್ರಯತ್ನಿಸುತ್ತಿದ್ದ ವೇಳೆ ಬಸಿರ್ಹತ್‌ ಜಿಲ್ಲಾ ಪೊಲೀಸ್‌ ಕಾನ್‌ಸ್ಟೆಬಲ್‌ವೊಬ್ಬರಿಗೆ ಗುಂಡು ತಗುಲಿ ಗಾಯವಾಗಿದೆ ಎಂದು ಹಿರಿಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಶಾಕ್ಚುರಾ ಬಜಾರ್ ಸಮೀಪದ ತಾಕಿ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದ ಗಲಭೆಗೆ ಸಂಬಂಧಿಸಿದಂತೆ ಕನಿಷ್ಠ 41 ಜನರನ್ನು ಬಂಧಿಸಲಾಗಿದೆ. ಸ್ಥಳದಲ್ಲಿ ಭಾರಿ ಸಂಖ್ಯೆ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

'ರಾಜಕೀಯ ಪಕ್ಷವೊಂದರ ಎರಡು ಗುಂಪಿನವರು ಸೋಮವಾರ ಕಿತ್ತಾಟ ನಡೆಸಿದ್ದರು. ಇದರಿಂದಾಗಿ ಪೊಲೀಸರು ಮಧ್ಯಪ್ರವೇಶಿಸಬೇಕಾಗಿ ಬಂದಿತ್ತು. ಈ ವೇಳೆ ಅನಂತಪುರಔಟ್‌ಪೋಸ್ಟ್‌ನ ಪೊಲೀಸ್‌ ಕಾನ್‌ಸ್ಟೆಬಲ್‌ ಪ್ರಭಾತ್‌ ಸರ್ದಾರ್‌ ಅವರ ಭುಜಕ್ಕೆ ಗುಂಡು ತಗುಲಿ ಗಾಯಗೊಂಡಿದ್ದಾರೆ' ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಸರ್ದಾರ್ ಅವರಿಗೆ ಬಸಿರ್ಹತ್‌ ಜಿಲ್ಲಾಸ್ಪತ್ರೆಯಲ್ಲಿ ತಕ್ಷಣವೇ ಚಿಕಿತ್ಸೆ ಕೊಡಿಸಿ ಬಳಿಕ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಸ್ತ್ರಚಿಕಿತ್ಸೆ ನಡೆಸಿ, ಗುಂಡನ್ನು ದೇಹದಿಂದ ಹೊರಗೆ ತೆಗೆಯಬೇಕಿದೆ ಎಂದೂ ವಿವರಿಸಿದ್ದಾರೆ.

'ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದೇವೆ. ಸದ್ಯ ಬಂಧಿಸಲ್ಪಿಟ್ಟಿರುವವರೆಲ್ಲ ಕಳೆದ ರಾತ್ರಿ ನಡೆದ ಗಲಭೆಯಲ್ಲಿ ಭಾಗವಹಿಸಿದ್ದವರೇ ಆಗಿದ್ದಾರೆ. ಅವರಿಂದ ಮಾಹಿತಿ ಪಡೆಯುತ್ತಿದ್ದೇವೆ' ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.