ADVERTISEMENT

ಸಿಂಗೂರ್‌ನಲ್ಲಿ ಅಮಿತ್ ಶಾ ಬೃಹತ್ ರೋಡ್ ಶೋ; ಕೈಗಾರಿಕೀಕರಣದ ಭರವಸೆ

ಪಿಟಿಐ
Published 7 ಏಪ್ರಿಲ್ 2021, 11:07 IST
Last Updated 7 ಏಪ್ರಿಲ್ 2021, 11:07 IST
ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ   

ಸಿಂಗೂರ್ (ಪ.ಬಂಗಾಳ): ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಸಿಂಗೂರ್‌ನಲ್ಲಿ ವರ್ಣರಂಜಿತ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೇರಿದರೆ ಶೀಘ್ರದಲ್ಲೇ ಈ ಪ್ರದೇಶವನ್ನು ಕೈಗಾರಿಕೀಕರಣಗೊಳಿಸುವ ಭರವಸೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿ ನಡೆಸಿದ ಮೂರು ದಿನಗಳ ನಂತರ ಸಿಂಗೂರ್‌ನಲ್ಲಿ ಅಮಿತ್ ಶಾ ರೋಡ್ ಶೋ ನಡೆಸಿದ್ದಾರೆ. ಅಭಿವೃದ್ಧಿಗೆ ಅಡ್ಡಿಯಾಗುವ ಮಮತಾ ಧೋರಣೆಯಿಂದಾಗಿ ಕೈಗಾರಿಕಾ ಅಭಿವೃದ್ಧಿ ಹಾಗೂ ಉದ್ಯೋಗದಿಂದ ವಂಚಿತವಾಗಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು.

ಬೆಂಬಲಿಗರ ಭಾರಿ ಹರ್ಷೋದ್ಗಾರದಿಂದ ವಿಶೇಷವಾಗಿ ಅಲಂಕರಿಸಿದ ವಾಹನದಲ್ಲಿ ಬಿಜೆಪಿ ಅಭ್ಯರ್ಥಿ ರವೀಂದ್ರನಾಥ್ ಭಟ್ಟಾಚಾರ್ಯ ಅವರಿಗಾಗಿ ಚುನಾವಣಾ ಪ್ರಚಾರದಲ್ಲಿ ಅಮಿತ್ ಶಾ ಭಾಗವಹಿಸಿದ್ದಾರೆ. ಇತ್ತೀಚೆಗಷ್ಟೇ ಟಿಎಂಸಿ ತೊರೆದಿದ್ದ ರವೀಂದ್ರನಾಥ್, ಬಿಜೆಪಿಯನ್ನು ಸೇರಿದ್ದರು.

ADVERTISEMENT

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾ, 2006ರ ಅಂದೋಲನದಿಂದಾಗಿ ಮುಚ್ಚಿರುವ ಸಿಂಗೂರ್ ಉದ್ಯಮವನ್ನು ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿಪಡಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ.

ನಮ್ಮ ಸಂಕಲ್ಪ ಪತ್ರದಂತೆ (ಪ್ರಣಾಳಿಕೆ) ಸಿಂಗೂರ್‌‌ನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಅಭಿವೃದ್ಧಿಯನ್ನು ಹಮ್ಮಿಕೊಳ್ಳಲಿದ್ದೇವೆ. ಈ ಪ್ರದೇಶದಲ್ಲಿ ಆಲೂಗಡ್ಡೆಗೆ 500 ಕೋಟಿ ರೂ.ಗಳ ಮಧ್ಯಂತರ ನಿಧಿ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಕೋಲ್ಕತ್ತ ಹಾಗೂ ನವದೆಹಲಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿರುವ ಸಿಂಗೂರ್‌ ಗ್ರಾಮದಲ್ಲಿ ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳ ಸ್ಥಾಪನೆಯನ್ನು ಬಿಜೆಪಿ ಖಚಿತಪಡಿಸಲಿದೆ. ನಾವು ಸ್ಪರ್ಧಿಸುವ ಬದಲು ಅಭಿವೃದ್ಧಿ, ಸಂವಾದ ಹಾಗೂ ಸಹಕಾರದ ರಾಜಕೀಯವನ್ನು ಮುಂದುವರಿಸಲಿದ್ದೇವೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ದಾಖಲಿಸಿ ಅಧಿಕಾರಕ್ಕೇರಲಿದೆ ಎಂದು ಅಮಿತ್ ಶಾ ಪುನರುಚ್ಛರಿಸಿದರು.

ಅಮಿತ್ ಶಾ, ಬಂಗಾಳದಲ್ಲಿ ಮತ್ತಷ್ಟು ಮೂರು ರೋಡ್ ಶೋಗಳಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ ಕೋಲ್ಕತ್ತದಲ್ಲಿ ನಡೆಯಲಿರುವ ಸಮಾವೇಶವೂ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.