ADVERTISEMENT

ಪ.ಬಂಗಾಳ ವಿಧಾನಸಭೆ ಚುನಾವಣೆ |ಕಾರ್ಯಕರ್ತರೊಂದಿಗೆ ಶಾ ಸಭೆ: ದಿಲೀಪ್‌ ಬಿಜೆಪಿ ಮುಖ

ಪಿಟಿಐ
Published 31 ಡಿಸೆಂಬರ್ 2025, 16:15 IST
Last Updated 31 ಡಿಸೆಂಬರ್ 2025, 16:15 IST
<div class="paragraphs"><p>ದಿಲೀಪ್‌ ಘೋಷ್‌</p></div>

ದಿಲೀಪ್‌ ಘೋಷ್‌

   

ಕೋಲ್ಕತ್ತ: ಮುಂದಿನ ಏಪ್ರಿಲ್‌ನಲ್ಲಿ ನಡೆಯುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲುವಿನ ದಡ ಮುಟ್ಟಿಸಬೇಕು ಎಂದು ನಿಶ್ಚಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪಕ್ಷದ ರಾಜ್ಯ ಘಟಕ ಆರಂಭಿಸಿರುವ ಸಿದ್ಧತೆಗಳನ್ನು ಬುಧವಾರ ಪರಿಶೀಲಿಸಿದರು.

ಮಹತ್ವದ ಬೆಳವಣಿಗೆಯಲ್ಲಿ, ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ದಿಲೀಪ್‌ ಘೋಷ್‌ ಅವರನ್ನು ಮುಂಬರುವ ಚುನಾವಣೆಯಲ್ಲಿ ಕೇಸರಿ ಪಾಳಯದ ಪ್ರಮುಖ ಮುಖವಾಗಿ ಶಾ ಸೂಚ್ಯವಾಗಿ ಬಿಂಬಿಸಿರುವುದು ಗಮನಾರ್ಹ.

ADVERTISEMENT

ಪಕ್ಷದ ಹಾಲಿ ಹಾಗೂ ಮಾಜಿ ಚುನಾಯಿತ ಪ್ರತಿನಿಧಿಗಳೊಂದಿಗೆ ರಹಸ್ಯ ಸಭೆ ನಡೆಸಿದ ಶಾ, ಮುಖಂಡರು ಹಾಗೂ ಕಾರ್ಯಕರ್ತರಿಗೆ ಹಲವು ಸೂಚನೆಗಳನ್ನು ನೀಡಿದರು ಎಂದು ಬಿಜೆಪಿ ರಾಜ್ಯ ಘಟಕದ ಮುಖಂಡರೊಬ್ಬರು ಸಭೆ ಬಳಿಕ ತಿಳಿಸಿದರು.

ದಿಲೀಪ್ ಘೊಷ್‌, ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಸುಕಾಂತ ಮಜುಂದಾರ್‌, ಹಾಲಿ ಅಧ್ಯಕ್ಷ ಸಮಿಕ್‌ ಭಟ್ಟಾಚಾರ್ಯ, ವಿಧಾನಸಭೆ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಅವರೊಂದಿಗೆ ಶಾ ಪ್ರತ್ಯೇಕ ಸಭೆ ನಡೆಸಿದರು. ಪಕ್ಷದ ಹಿರಿಯ ನಾಯಕರು ಹಾಗೂ ಹೊಸಬರ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ಪ್ರಯತ್ನದ ಭಾಗವಾಗಿ ಶಾ ಈ ಸಭೆ ನಡೆಸಿದರು ಎಂದು ಮತ್ತೊಬ್ಬ ನಾಯಕ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳಕ್ಕೆ ಪಕ್ಷದ ವೀಕ್ಷಕರಾದ ಸುನಿಲ್‌ ಬನ್ಸಾಲ್, ಭೂಪೇಂದ್ರ ಯಾದವ್, ಬಿಪ್ಲಬ್ ದೇವ್ ಹಾಗೂ ಅಮಿತ್‌ ಮಾಳವೀಯಾ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಘೋಷ್‌,‘ಸಭೆ ಕುರಿತಂತೆ ಹೆಚ್ಚಿಗೆ ಹೇಳುವುದಿಲ್ಲ. ನನ್ನ ಅನುಭವ ಹಾಗೂ ಅಭಿಪ್ರಾಯಗಳನ್ನು ಆಲಿಸಲು ಕರೆದಿದ್ದರು. ಮುಂದಿನ ವರ್ಷದ ಚುನಾವಣೆ ವೇಳೆ  ನೀವು ಸಕ್ರಿಯ ದಿಲೀಪ್‌ ಘೋಷ್‌ನನ್ನು ಕಾಣುವಿರಿ ಎಂದಷ್ಟೆ ಹೇಳಬಲ್ಲೆ’ ಎಂದು ಪ್ರತಿಕ್ರಿಯಿಸಿದರು.

ಸ್ವಾಮಿ ವಿವೇಕಾನಂದ, ಬಂಕಿಮ ಚಂದ್ರ ಚಟ್ಟೋಪಾಧ್ಯಾಯ, ರವೀಂದ್ರನಾಥ ಟ್ಯಾಗೋರ್ ಸೇರಿ ಹಲವು ಧೀಮಂತರ ಕುರಿತು ಸಭೆಯಲ್ಲಿ ಶಾ ಉಲ್ಲೇಖಿಸಿದರು ಎಂದೂ ತಿಳಿಸಿದ್ದಾರೆ.

ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಲ್ಲೂ ಉತ್ಸಾಹ ಇಮ್ಮಡಿಗೊಂಡಿದೆ. ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ. ರಾಜ್ಯದಲ್ಲಿ ಬದಲಾವಣೆ ತರುತ್ತೇವೆ
ಸುವೇಂದು ಅಧಿಕಾರಿ ವಿಧಾನಸಭೆ ವಿಪಕ್ಷ ನಾಯಕ
ಶಾ ನೀಡಿದ ಸೂಚನೆಗಳು
  • ಪಕ್ಷದ ಚುನಾಯಿತ ಪ್ರತಿನಿಧಿಗಳು ವಾರದಲ್ಲಿ ಕನಿಷ್ಠ ನಾಲ್ಕು ದಿನ ತಮ್ಮ ಕ್ಷೇತ್ರಗಳಲ್ಲಿ ಇರಬೇಕು. ಈ ಅವಧಿಯಲ್ಲಿ ಕನಿಷ್ಠ ಐದು ಬೀದಿ ಬದಿ ಸಭೆಗಳನ್ನು ಆಯೋಜಿಸಬೇಕು

  • ಟಿಕೆಟ್‌ ಆಕಾಂಕ್ಷಿಗಳು ಸ್ಪರ್ಧಿಸಲು ತಾವು ಏಕೆ ಅರ್ಹರು ಎಂಬುದನ್ನು ಮುಂದಿನ ಎರಡು ತಿಂಗಳಲ್ಲಿ ಸಾಬೀತುಪಡಿಸಬೇಕು

  • ಬೂತ್‌ ಮಟ್ಟದಲ್ಲಿ ಕಾರ್ಯಕರ್ತರನ್ನು ಸಕ್ರಿಯಗೊಳಿಸಬೇಕು ಹಾಗೂ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಸ್ತಾರಕ’ರನ್ನು ನಿಯೋಜನೆ ಮಾಡಬೇಕು 

ಘೋಷ್‌ ಮುಖ್ಯ ಏಕೆ?
ದಿಲೀಪ್‌ ಘೋಷ್‌ ಅವರು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥರಾಗಿದ್ದ ವೇಳೆ 2019ರಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆ ಮಾಡಿತ್ತು. ಆಗ ಬಿಜೆಪಿ ಮೂರು ಶಾಸಕರನ್ನು ಹೊಂದಿತ್ತು. ಆ ಚುನಾವಣೆಯಲ್ಲಿ 70 ಸ್ಥಾನಗಳಲ್ಲಿ ಗೆದ್ದಿತ್ತು. 18 ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದು ಬೀಗಿತ್ತು. ಹೀಗಾಗಿ ಘೋಷ್‌ ಅವರನ್ನು ರಾಜ್ಯ ಘಟಕದ ಬಹು ಯಶಸ್ವಿ ಅಧ್ಯಕ್ಷ ಎಂದೇ ಪರಿಗಣಿಸಲಾಗುತ್ತಿತ್ತು. ಆದರೆ ಈ ವರ್ಷದ ಆರಂಭದಲ್ಲಿ ದಿಘಾ ಪಟ್ಟಣದಲ್ಲಿ ನಡೆದ ಜಗನ್ನಾಥ ದೇವಸ್ಥಾನ ಉದ್ಘಾಟನೆ ಸಮಾರಂಭದಲ್ಲಿ ಘೋಷ್‌ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಈ ದೃಶ್ಯಗಳು ಸುದ್ದಿವಾಹಿನಿಗಳಲ್ಲಿ ವ್ಯಾಪಕವಾಗಿ ಬಿತ್ತರಗೊಂಡಿದ್ದವು. ಅಂದಿನಿಂದ ಘೋಷ್‌ ಅವರನ್ನು ಬಿಜೆಪಿಯಲ್ಲಿ ನಿರ್ಲಕ್ಷಿಸಲಾಗಿತ್ತು ಎನ್ನಲಾಗುತ್ತಿದೆ. ಈಗ ಅವರ ಕುರಿತ ಅಸಮಾಧಾನ ಶಮನಗೊಂಡಿದ್ದು ಈಗ ಮುಂಬರುವ ಚುನಾವಣೆಯಲ್ಲಿ ಅವರಿಗೆ ಪಕ್ಷವನ್ನು ಗೆಲುವಿನ ದಡ ಮುಟ್ಟಿಸುವ ಮಹತ್ತರ ಜವಾಬ್ದಾರಿ ನೀಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.