ಕೋಲ್ಕತ್ತ: ಹನುಮ ಜಯಂತಿ ದಿನದಂದು ರಾಜ್ಯದ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಹಿಂಸಾಚಾರ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ಮುಸ್ಲಿಮರಿಗೆ ರಕ್ಷಣೆ ನೀಡುವಂತೆ’ ಹಿಂದೂ ಸಹೋದರರಿಗೆ ಕರೆ ನೀಡಿದ್ದಾರೆ.
ಪುರ್ಬಾ ಮೇದಿನಿಪುರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕೋಮು ಗಲಭೆ ಪ್ರಕರಣಗಳು ಹೆಚ್ಚುತ್ತಿವೆ. ನಮ್ಮ ವಿರೋಧಿಗಳು ಶಾಂತಿ, ಸೌಹಾರ್ದತೆ ಕದಡಲು ಈಗಾಗಲೇ ಎಲ್ಲ ರೀತಿಯ ಯೋಜನೆ ರೂಪಿಸಿದ್ದಾರೆ. ಎಪ್ರಿಲ್ 6ರಂದು ನಡೆಯುವ ಹನುಮ ಜಯಂತಿಯಂದು ಅಲ್ಪಸಂಖ್ಯಾತರಿಗೆ ಹಿಂಸೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹಿಂದೂ ಸಹೋದರರ ಮೇಲಿದೆ’ ಎಂದು ಹೇಳಿದ್ದಾರೆ.
ಅಲ್ಪಸಂಖ್ಯಾತರ ಜೊತೆಗೆ ಆದಿವಾಸಿಗಳು ಮತ್ತು ಪರಿಶಿಷ್ಟ ಜಾತಿಯವರಿಗೂ ರಕ್ಷಣೆ ಕೊಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದ್ದಾರೆ.
ಶ್ರೀರಾಮನವಮಿಯಂದು ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ನಡೆದು ಅಪಾರ ಹಾನಿಯಾಗಿತ್ತು. ಘರ್ಷಣೆಯಲ್ಲಿ ಹಲವಾರು ಅಂಗಡಿ ಮುಂಗಟ್ಟುಗಳು, ವಾಹನಗಳು ಬೆಂಕಿಗಾಹುತಿಯಾಗಿದ್ದವು. ಈ ಸಂಬಂಧ 16 ಜನರನ್ನು ಪೊಲೀಸರು ಬಂಧಿಸಿದ್ದು, ನಿಷೇಧಾಜ್ಞೆ ಹೇರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.