ADVERTISEMENT

ಪಶ್ಚಿಮ ಬಂಗಾಳ: ಸಚಿವ ಸ್ಥಾನಕ್ಕೆ ಲಕ್ಷ್ಮಿ ರತನ್‌ ಶುಕ್ಲಾ ರಾಜೀನಾಮೆ

ಪಿಟಿಐ
Published 5 ಜನವರಿ 2021, 14:52 IST
Last Updated 5 ಜನವರಿ 2021, 14:52 IST
ಲಕ್ಷ್ಮಿ ರತನ್‌ ಶುಕ್ಲಾ (ಫೇಸ್‌ಬುಕ್‌ ಚಿತ್ರ)
ಲಕ್ಷ್ಮಿ ರತನ್‌ ಶುಕ್ಲಾ (ಫೇಸ್‌ಬುಕ್‌ ಚಿತ್ರ)   

ಕೋಲ್ಕತ್ತ: ಪಶ್ಚಿಮ ಬಂಗಾಳದ ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ಲಕ್ಷ್ಮಿ ರತನ್‌ ಶುಕ್ಲಾ ಅವರು ಮಂಗಳವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶುಕ್ಲಾ ಅವರು ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲ ಜಗದೀಪ್‌ ಧನ್‌ಕರ್‌ ಅವರಿಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ ಸಾರಿಗೆ ಸಚಿವ ಸುವೇಂದು ಅಧಿಕಾರಿ ಟಿಎಂಸಿ ಪಕ್ಷ ತೋರೆದು ಹದಿನೈದು ದಿನಗಳ ಬಳಿಕ ಇದೀಗ ಶುಕ್ಲಾ ರಾಜೀನಾಮೆ ನೀಡಿರುವುದು ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ತಕ್ಕಮಟ್ಟಿಗೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ADVERTISEMENT

ಪಶ್ಚಿಮ ಬಂಗಾಳದ ರಣಜಿ ತಂಡದ ಮಾಜಿ ನಾಯಕ, 39 ವರ್ಷದ ಶುಕ್ಲಾ ಅವರು ಹೌರಾ (ಉತ್ತರ) ಕ್ಷೇತ್ರದ ಶಾಸಕರಾಗಿದ್ದು, ರಾಜಕೀಯದಿಂದ ನಿವೃತ್ತಿ ಹೊಂದಲು ನಿರ್ಧರಿಸಿರುವುದಾಗಿ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ಲಾ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಶುಕ್ಲಾ ಅವರು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಕ್ರೀಡೆಗಾಗಿ ಹೆಚ್ಚಿನ ಸಮಯ ನೀಡಲು ಬಯಸಿದ್ದು, ಶಾಸಕರಾಗಿ ಮುಂದುವರಿಯಲಿದ್ದಾರೆ. ಇದನ್ನು ನಕಾರಾತ್ಮಕ ರೀತಿಯಲ್ಲಿ ತೆಗೆದುಕೊಳ್ಳುವುದು ಬೇಡ’ ಎಂದು ಹೇಳಿದ್ದಾರೆ.

ರಾಜೀನಾಮೆ ಅಂಗೀಕಾರ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲಹೆ ಮೇರೆಗೆ ರಾಜ್ಯಪಾಲ ಜಗದೀಪ್‌ ಧನ್‌ಕರ್‌ ಅವರು ಸಚಿವ ಲಕ್ಷ್ಮಿ ರತನ್ ಶುಕ್ಲಾ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಬ್ಯಾನರ್ಜಿ ಶಿಫಾರಸು ಮಾಡಿದಂತೆ ಯುವ ಜನ ಮತ್ತು ಕ್ರೀಡಾ ಇಲಾಖೆ ಉಸ್ತುವಾರಿಯನ್ನು ಅರೂಪ್‌ ಬಿಸ್ವಾಸ್‌ಗೆ ವಹಿಸಲಾಗುವುದು ಎಂದು ಧಂಕರ್‌ ಆದೇಶದಲ್ಲಿ ತಿಳಿಸಿದ್ದಾರೆ.

ಅರೂಪ್‌ ಬಿಸ್ವಾಸ್ ಯುವ ಜನ ಮತ್ತು ಕ್ರೀಡಾ ಇಲಾಖೆ ಸಚಿವರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.