ಶ್ರೀ ತೇಜ್ ಬಹುದ್ದೂರ್ ಜಿ ಮಹರಾಜ್ ಅವರ ‘ಬಲಿದಾನ ದಿವಸ’ದ ಅಂಗವಾಗಿ ಲಖನೌನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ ಭಾಗವಹಿಸಿದರು
–ಪಿಟಿಐ ಚಿತ್ರ
ಲಖನೌ: ‘ಪಾಕಿಸ್ತಾನದಲ್ಲಿ ಏನಾಗಿತ್ತು ಎಂದು ಎಲ್ಲರಿಗೂ ತಿಳಿದಿದೆ. ನಂಕಾನಾ ಸಾಹಿಬ್ (ಗುರು ನಾನಕ್ ಅವರ ಹುಟ್ಟಿದೂರು) ನಮ್ಮಿಂದ ಇನ್ನಷ್ಟು ವರ್ಷ ದೂರ ಇರಬೇಕು? ನಾವು ನಮ್ಮ ಹಕ್ಕುಗಳನ್ನು ವಾಪಸ್ ಪಡೆದುಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೇಳಿದರು.
ಇಲ್ಲಿನ ಯಹಿಯಗಂಜ್ ಗುರುದ್ವಾರದಲ್ಲಿ ನಡೆದ ಒಂಭತ್ತನೇ ಸಿಖ್ ಗುರು ಶ್ರೀ ತೇಜ್ ಬಹುದ್ದೂರ್ ಜಿ ಮಹರಾಜ್ ಅವರ ‘ಬಲಿದಾನ ದಿವಸ’ದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಾಂಗ್ಲಾದೇಶದಲ್ಲಿ ಏನಾಗುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ. ನಾವು ಈ ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇತಿಹಾಸವು ನಮಗೆ ಅವಕಾಶ ನೀಡುತ್ತಿದೆ. ಹಿಂದೂಗಳು ಹಾಗೂ ಸಿಖ್ಖರ ಮಧ್ಯೆ ಜಗಳ ತಂದು ಹಾಕಲು ಯತ್ನಿಸಿಲಾಗುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದರು.
‘ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಈ ಅಭಿಯಾನದಲ್ಲಿ ನಾವೆಲ್ಲರೂ ಒಂದಾಗಬೇಕು. ಇತಿಹಾಸವನ್ನು ಬಹಳ ವಿಕೃತ ರೀತಿಯಲ್ಲಿ ಮರುಕಳಿಸಲು ಕೆಲವರು ಯತ್ನಿಸುತ್ತಿದ್ದಾರೆ. ಗುರು ಪರಂಪರೆಯನ್ನು ನೆನಪಿನಲ್ಲಿಟ್ಟುಕೊಂಡು ಈ ಅಭಿಯಾನಕ್ಕೆ ನಾವು ಸಿದ್ಧರಾಗಬೇಕು’ ಎಂದರು.
‘ಈ ದೇಶ, ಧರ್ಮಕ್ಕಾಗಿ ಸಿಖ್ ಸಮುದಾಯದವರು ಹುತಾತ್ಮರಾಗಿದ್ದಾರೆ. ಇದನ್ನು ನಾವು ಅನುಸರಿಸಬೇಕು. ನಮ್ಮ ಮುಂದಿನ ಪೀಳಿಗೆಯವರ ಭವ್ಯ ಭವಿಷ್ಯಕ್ಕಾಗಿ ಇದನ್ನೇ ನಾವು ನಮ್ಮ ಇತಿಹಾಸವನ್ನಾಗಿ ಮಾಡಿಕೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.