ಕರ್ನಲ್ ಸೋಫಿಯಾ ಖುರೇಶಿ
ನವದೆಹಲಿ: ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಕಾಯಂ ನೇಮಕಾತಿ ನೀಡುವ ಬಗ್ಗೆ ಸುಪ್ರೀಂ ಕೋರ್ಟ್ 2020ರಲ್ಲಿ ಐತಿಹಾಸಿಕ ತೀರ್ಪು ನೀಡಿತ್ತು. ತೀರ್ಪು ನೀಡುವ ವೇಳೆ ಕರ್ನಲ್ ಸೋಫಿಯಾ ಖುರೇಷಿ ಅವರ ಸಾಧನೆಯನ್ನು ಉಲ್ಲೇಖಿಸಿತ್ತು.
ಸೋಫಿಯಾ ಅವರು ‘ಆಪರೇಷನ್ ಸಿಂಧೂರ’ದ ಕುರಿತು ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ್ದರು. ತೀರ್ಪು ನೀಡುವ ವೇಳೆ ಹಲವು ಮಹಿಳಾ ಅಧಿಕಾರಿಗಳ ಸಾಧನೆಗಳನ್ನು ನ್ಯಾಯಾಲಯ ಉಲ್ಲೇಖಿಸಿತ್ತು. ಸೋಫಿಯಾ ಅವರ ಸಾಧನೆಯನ್ನು ಕೂಡ ಉದಾಹರಣೆಯಾಗಿ ನೀಡಿತ್ತು.
‘ಅದೇ ಮೊದಲ ಬಾರಿಗೆ ಭಾರತವು ದೊಡ್ಡ ಮಟ್ಟದಲ್ಲಿ ಆಯೋಜಿಸಿದ್ದ ‘ಎಕ್ಸೈಜ್ ಫೋರ್ಸ್ 18’ ಹೆಸರಿನ ವಿವಿಧ ದೇಶಗಳ ಸೇನಾಭ್ಯಾಸದಲ್ಲಿ ಭಾರತದ ಸೇನಾ ತಂಡವನ್ನು ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಅವರು ಮುನ್ನಡೆಸಿದ್ದರು’ ಎಂದು ಸುಪ್ರೀಂ ಕೋರ್ಟ್ ಶ್ಲಾಘನೆ ವ್ಯಕ್ತಪಡಿಸಿತ್ತು.
‘2006ರಲ್ಲಿ ಕಾಂಗೋದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಸೋಫಿಯಾ ಅವರು ಪಾಲ್ಗೊಂಡಿದ್ದರು. ಈ ವೇಳೆ ಕದನ ವಿರಾಮ ಉಲ್ಲಂಘನೆಯಂಥ ಘಟನೆಗಳ ಮೇಲ್ವಿಚಾರಣೆ ಮತ್ತು ಮಾನವೀಯ ನೆರವು ಚಟುವಟಿಕೆಗಳ ನೇತೃತ್ವ ವಹಿಸಿದ್ದರು’ ಎಂದೂ ಉಲ್ಲೇಖಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.