ADVERTISEMENT

ಬಡವರಿಗೆ ಉಚಿತವಾಗಿ ಕೋವಿಡ್-19 ಲಸಿಕೆ ಎಂದು ಸಿಗಲಿದೆ? ಅಖಿಲೇಶ್ ಯಾದವ್

ಪಿಟಿಐ
Published 16 ಜನವರಿ 2021, 15:26 IST
Last Updated 16 ಜನವರಿ 2021, 15:26 IST
ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್
ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್   

ಲಖನೌ: ದೇಶಾದ್ಯಂತ ಕೋವಿಡ್-19 ಲಸಿಕೆ ವಿತರಣೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರದಂದು ಚಾಲನೆ ನೀಡಿದರು. ಈ ಮಧ್ಯೆ ಬಡವರಿಗೆ ಉಚಿತವಾಗಿ ಕೋವಿಡ್-19 ಲಸಿಕೆ ಎಂದು ಸಿಗಲಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರಶ್ನೆ ಮಾಡಿದ್ದಾರೆ.

ದೇಶದ ವೈದ್ಯರ ಮೇಲೆ ನನಗೆ ನಂಬಿಕೆಯಿದೆ. ಆದರೆ ಸರ್ಕಾರದ ಮೇಲೆ ಕಿಂಚಿತ್ತೂ ಇಲ್ಲ ಎಂದವರು ವಾಗ್ದಾಳಿ ನಡೆಸಿದರು.

ಕೋವಿಡ್-19 ಲಸಿಕೆ ದಕ್ಷತೆಯನ್ನು ಪ್ರಶ್ನೆ ಮಾಡಿರುವ ಅವರು, ಎಲ್ಲ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಸುವ ಬಿಜೆಪಿ ಪಕ್ಷದ ಕಾರ್ಯಕರ್ತರೇ ಮೊದಲು ಸರದಿ ಸಾಲಿನಲ್ಲಿ ನಿಂತು ಲಸಿಕೆಯನ್ನು ಪಡೆಯಬೇಕು ಎಂದು ಹೇಳಿದರು.

ADVERTISEMENT

ಒಂದು ವರ್ಷದ ಬಳಿಕ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದಾಗ, ಎಲ್ಲರಿಗೂ ಉಚಿತವಾಗಿ ಕೋವಿಡ್-19 ಲಸಿಕೆ ನೀಡಲಿದ್ದೇವೆ ಎಂದು ಭರವಸೆ ನೀಡಿದರು.

ಇತ್ತೀಚೆಗಷ್ಟೇ 'ಬಿಜೆಪಿ ಲಸಿಕೆ' ತಾವು ಪಡೆಯುವುದಿಲ್ಲ ಎಂಬ ಅಖಿಲೇಷ್ ಯಾದವ್ ಹೇಳಿಕೆಯು ವಿವಾದಕ್ಕೀಡಾಗಿತ್ತು. ಬಳಿಕ ಸ್ಪಷ್ಟನೆ ನೀಡಿದ್ದ ಅಖಿಲೇಶ್, ತಾವು ವಿಜ್ಞಾನಿಗಳ ವಿರುದ್ಧ ಹೇಳಿಕೆ ನೀಡಿಲ್ಲ ಎಂದಿದ್ದರು.

ಲಸಿಕೆ ಕೇಂದ್ರಗಳಿಗೆ ಬೇಕಾದಷ್ಟು ಹಣದ ನೆರವನ್ನು ನೀಡಲಾಗುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತೇನೆ. ಇಲ್ಲವಾದ್ದಲ್ಲಿ ಕೆಲಸ ಹೇಗೆ ನಡೆಯುತ್ತದೆ? ಲಸಿಕೆ ಸ್ಟೋರೆಜ್ ಹಾಗೂ ರವಾನೆಗೆ ಸರಿಯಾದ ವ್ಯವಸ್ಥೆ ಮಾಡಲಾಗಿದೆಯೇ? ಕರ್ತವ್ಯ ನಿರತರಾದವರಿಗೆ ಸೂಕ್ತ ತರಬೇತಿ ನೀಡಲಾಗಿದೆಯೇ? ನನಗೆ ವೈದ್ಯರ ಮೇಲೆ ನಂಬಿಕೆಯಿದೆ. ಆದರೆ ಸರ್ಕಾರದ ಮೇಲಿಲ್ಲ ಎಂದವರು ಹೇಳಿದರು.

ಕೊರೊನಾ ವೈರಸ್ ಲಸಿಕೆ ಹೊರಬಂದಿರುವುದು ಉತ್ತಮ ಅಂಶ. ಆದರೆ ವೈದ್ಯರು ಹೇಳುವುದನ್ನು ಮಾತ್ರ ನಂಬುತ್ತೇನೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನಲ್ಲ ಎಂದು ಟಾಂಗ್ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.