ಕೋಲ್ಕತ್ತ (ಪಿಟಿಐ): ‘ನಮ್ಮ ಜೊತೆ ಸಂಘರ್ಷಕ್ಕೆ ಇಳಿಯುವವರು ಚೂರು ಚೂರಾಗುತ್ತಾರೆ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಿರೋಧಿಗಳಿಗೆ ಬುಧವಾರ ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಈದ್ ಹಬ್ಬದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ಪ್ರಾರ್ಥನಾ ಸಮಾರಂಭದಲ್ಲಿ ಮಾತನಾಡಿದ ಅವರು ಯಾವ ಪಕ್ಷದ ಹೆಸರನ್ನೂ ಉಲ್ಲೆಖಿಸದೆ, ಪರೋಕ್ಷವಾಗಿ ಬಿಜೆಪಿಗೆ ಈ ಸಂದೇಶ ರವಾನಿಸಿದ್ದಾರೆ.
ಬಿಜೆಪಿಯವರು ‘ಜೈ ಶ್ರೀರಾಂ’ ಘೋಷಣೆ ಕೂಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಮತಾ, ‘ಮತ್ತೆ ಮತ್ತೆ ಈ ಘೋಷಣೆ ಕೂಗುವ ಮೂಲಕ ಬಿಜೆಪಿಯು ರಾಜಕೀಯದಲ್ಲಿ ಧರ್ಮವನ್ನು ಬೆರೆಸುತ್ತಿದೆ. ಹಿಂದೂಗಳು ತ್ಯಾಗಕ್ಕೆ, ಮುಸ್ಲಿಮರು ಸಮಗ್ರತೆಗೆ, ಕ್ರೈಸ್ತರು ಪ್ರೀತಿಗೆ, ಸಿಕ್ಖರು ಬಲಿದಾನಕ್ಕೆ ಸಂಕೇತವಾಗಿದ್ದಾರೆ. ಇದು ನಮ್ಮ ಪ್ರೀತಿಯ ಹಿಂದೂಸ್ತಾನ ಮತ್ತು ನಾವಿದನ್ನು ರಕ್ಷಿಸುತ್ತೇವೆ’ ಎಂದರು.
‘ಸೂರ್ಯೋದಯವಾಗುವಾಗ ಕೆಲವೊಮ್ಮೆ ಕಿರಣಗಳು ತೀಕ್ಷ್ಣವಾಗಿರುತ್ತವೆ. ಸ್ವಲ್ಪಹೊತ್ತಿನಲ್ಲಿ ಆ ತೀಕ್ಷ್ಣತೆ ಕಡಿಮೆಯಾಗುತ್ತದೆ. ಯಾರೂ ಭಯಪಡಬೇಕಾಗಿಲ್ಲ. ಅವರು ಎಷ್ಟು ವೇಗವಾಗಿ ಇವಿಎಂಗಳನ್ನು ತಿರುಚಿದ್ದಾರೋ ಅಷ್ಟೇ ವೇಗವಾಗಿ ನಾಶ ಹೊಂದಲಿದ್ದಾರೆ’ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಆರೋಪ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.