ADVERTISEMENT

ಚುನಾವಣೆ ಸಮಯದಲ್ಲೇ ಏಕೆ ಮೀಸಲಾತಿ ಮಸೂದೆ: ಆನಂದ್ ಶರ್ಮಾ ಪ್ರಶ್ನೆ

ರಾಜ್ಯಸಭೆಯಲ್ಲಿ ತೀವ್ರ ಚರ್ಚೆ * ಮಹಿಳೆಯರಿಗೇಕಿಲ್ಲ ಮೀಸಲಾತಿ: ಕಾಂಗ್ರೆಸ್ ಪ್ರಶ್ನೆ

ಏಜೆನ್ಸೀಸ್
Published 9 ಜನವರಿ 2019, 20:24 IST
Last Updated 9 ಜನವರಿ 2019, 20:24 IST
ಕಾಂಗ್ರೆಸ್ ಸಂಸದ ಆನಂದ್ ಶರ್ಮಾ
ಕಾಂಗ್ರೆಸ್ ಸಂಸದ ಆನಂದ್ ಶರ್ಮಾ   

ನವದೆಹಲಿ:ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಯಾಕೆ ಮೀಸಲಾತಿ ಮಸೂದೆ ಮಂಡನೆಗೆ ಮುಂದಾದಿರಿ ಎಂದು ಕಾಂಗ್ರೆಸ್ ಸಂಸದ ಆನಂದ್ ಶರ್ಮಾ ಸರ್ಕಾರವನ್ನು ಪ್ರಶ್ನಸಿದರು.

ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ರಾಜ್ಯಸಭೆಯಲ್ಲಿ ಬುಧವಾರ ಮಂಡಿಸಲಾಗಿದ್ದು, ಪರ–ವಿರೋಧ ಚರ್ಚೆ ನಡೆದಿದೆ.

ಇದನ್ನೂ ಓದಿ:ಮೇಲ್ಜಾತಿಗೆ ಶೇ 10 ಮೀಸಲು

ADVERTISEMENT

‘ಮೀಸಲಾತಿಗೆ ಸಂಬಂಧಿಸಿ ನಾವು ಇತಿಹಾಸವನ್ನು ಪರಿಶೀಲಿಸಬೇಕಾದ ಅಗತ್ಯವಿದೆ. ಸಾಮಾಜಿಕವಾಗಿ ಹಿಂದುಳಿದವರಿಗೆ ಸಂವಿಧಾನವು ಮೀಸಲಾತಿ ನೀಡಿದೆ’ ಎಂದು ಆನಂದ್ ಶರ್ಮಾ ಹೇಳಿದರು. ‘ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್ ಕೇಳುವುದಕ್ಕೆ ಚೆನ್ನಾಗಿದೆ. ಆದರೆ ಈಗ ಏನಾಗುತ್ತಿದೆ? ಅಚ್ಛೇ ದಿನ ಬಂತೇ’ ಎಂದು ಅವರು ಪ್ರಶ್ನಿಸಿದರು.

ಮಹಿಳೆಯರಿಗೇಕೆ ಮೀಸಲಾತಿ ಇಲ್ಲ:‘ನೀವು ತ್ರಿವಳಿ ತಲಾಖ್ ನಿಷೇಧಕ್ಕೆ ಹೋರಾಡುತ್ತಿದ್ದೀರಿ. ಆದರೆ ನೀವೇಕೆ ಮಹಿಳೆಯರಿಗೆ ಮೀಸಲಾತಿ ಪ್ರಸ್ತಾವ ಮಾಡುತ್ತಿಲ್ಲ’ ಎಂದು ಶರ್ಮಾ ಪ್ರಶ್ನಿಸಿದರು.

ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ನಾವು ಬೆಂಬಲಿಸುತ್ತೇವೆ. ಆದರೆ, ಮಸೂದೆ ಸಿದ್ಧಪಡಿಸುವುದಕ್ಕೂ ಮುನ್ನ ನಮ್ಮ ಜತೆ ಸಮಾಲೋಚಿಸಬೇಕಿತ್ತು ಎಂದು ಸಮಾಜವಾದಿ ಪಕ್ಷದ ರಾಮ್‌ ಗೋಪಾಲ್ ಯಾದವ್ ಹೇಳಿದರು.

ನಮ್ಮಲ್ಲಿ ಉದ್ಯೋಗಾವಕಾಶಗಳಿದ್ದರೆ ಆಗ ಮೀಸಲಾತಿಗೆ ಮಹತ್ವ ಬರುತ್ತದೆ. ಆದರೆ ನಮ್ಮಲ್ಲಿ ಉದ್ಯೋಗಗಳೇ ಇಲ್ಲವಲ್ಲ ಎಂದೂ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ರಾಹುಲ್ ಗಾಂಧಿ ಏಕಿಲ್ಲ?:ಪ್ರಧಾನಿ ನರೇಂದ್ರ ಮೋದಿಯವರೂ ಹಿಂದುಳಿದ ವರ್ಗಗಳಿಂದ ಬಂದವರು. ಅವರಿಗೆ ಬಡ ಜನರ ಬಗ್ಗೆ ನಿಜವಾದ ಕಾಳಜಿ ಇದೆ ಎಂದು ಬಿಜೆಪಿ ಸಂಸದ ಪ್ರಭಾತ್ ಝಾ ಹೇಳಿದರು. ಅಲ್ಲದೆ, ‘ರಾಹುಲ್ ಗಾಂಧಿ ಅವರು ರಫೇಲ್ ಬಗ್ಗೆ ಕನಸು ಕಾಣುತ್ತಿರಬಹುದು. ಮೀಸಲಾತಿ ಮಸೂದೆ ಬಗ್ಗೆ ಅವರು ಯಾಕೆ ಮಾತನಾಡುತ್ತಿಲ್ಲ’ ಎಂದೂ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.