ADVERTISEMENT

ಪಾಕಿಸ್ತಾನ ಪ್ರಜೆಗಳಿಗೆ ನಾವೇಕೆ ಪೌರತ್ವ ನೀಡಬೇಕು: ಪ್ರಧಾನಿಗೆ ಚಿದಂಬರಂ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 9:54 IST
Last Updated 18 ಡಿಸೆಂಬರ್ 2019, 9:54 IST
   

ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ‍ಪಕ್ಷಗಳ ನಡುವಿನ ವಾಕ್ಸಮರ ಮುಂದುವರೆದಿದೆ.

ಮಂಗಳವಾರ ಜಾರ್ಖಂಡ್‌ನಲ್ಲಿ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ, ‘ಕಾಂಗ್ರೆಸ್‌ ಪಕ್ಷಕ್ಕೆ ಧೈರ್ಯವಿದ್ದರೆ ಪ್ರತಿ ಪಾಕಿಸ್ತಾನ ಪ್ರಜೆಗೂ ಭಾರತೀಯ ಪೌರತ್ವ ನೀಡುವುದಾಗಿ ಘೋಷಿಸಲಿ‘ ಎಂದಿದ್ದರು.

ಪ್ರಧಾನಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ, ’ಈಗಾಗಲೇ ಪಾಕಿಸ್ತಾನ ಪ್ರಜೆಗಳಾಗಿರುವ ಜನರಿಗೆ ನಾವೇಕೆಭಾರತೀಯ ಪೌರತ್ವ ನೀಡಬೇಕು? ಈ ತರಹದ ಸವಾಲುಗಳನ್ನು ಪ್ರತಿ ಪಕ್ಷಗಳಿಗೆ ಹಾಕುವುದರ ಅರ್ಥವೇನು‘ ಎಂದು ಟ್ವೀಟ್‌ ಮೂಲಕ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದ್ದಾರೆ.

ADVERTISEMENT

‘ಇಂದಿನ ಜನಾಂಗ ಮತ್ತು ವಿದ್ಯಾರ್ಥಿಗಳು ಜಾತ್ಯತೀತ, ಉದಾರ, ಸಹಿಷ್ಠು ಮತ್ತು ಮಾನವೀಯ ಗುಣಗಳನ್ನು ಪ್ರದರ್ಶಿಸುತ್ತಿರುವುದು ಸಂತೋಷಕರ ವಿಚಾರ. ಕೇಂದ್ರ ಸರ್ಕಾರ ಇಂತಹ ಮೌಲ್ಯಗಳಿಗೆ ಸವಾಲು ಎಸೆಯುವ ಕೆಲಸ ಮಾಡುತ್ತಿದೆಯಾ‘ ಎಂದು ಕೇಳುವ ಮೂಲಕ ಜಾಮಿಯ ಮಿಲಿಯಾ ವಿ.ವಿಯಲ್ಲಿ ನಡೆದ ಘಟನೆಯನ್ನು ಚಿದಂಬರಂ ಖಂಡಿಸಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ಹೇಳಿಕೆಗೆ ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್‌ ಸಿಬಲ್‌, ‘ಪ್ರೀಯ ಮೋದಿಯವರೆ, ಪಾಕಿಸ್ತಾನ ಪ್ರಜೆಗಳ ಬದಲಾಗಿ ಭಾರತೀಯ ಪ್ರಜೆಗಳ ಸಮಸ್ಯೆಗಳ ಬಗ್ಗೆ ಗಮನ ಹರಿಸಿ. ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಭಾರತದ ಜನರು ನಿಮ್ಮನ್ನು ಆಯ್ಕೆ ಮಾಡಿದ್ದಾರೆ ಎಂಬುದು ನಿಮಗೆ ನೆನಪಿರಲಿ‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.