ಚೆನ್ನೈ: 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಮಕ್ಕಳ್ ನೀದಿ ಮೈಯಂ (ಎಂಎನ್ಎಂ) ಪಕ್ಷದ ಸ್ಥಾಪಕ ಹಾಗೂ ನಟ ಕಮಲ್ ಹಾಸನ್ ಪ್ರಕಟಿಸಿದ್ದಾರೆ.
‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ’ ಎಂದು ಅವರು ಶನಿವಾರ ದೃಢಪಡಿಸಿದ್ದಾರೆ.
ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲು ಪಕ್ಷವು ಕಮಲ್ ಹಾಸನ್ ಅವರಿಗೆ ಅಧಿಕಾರ ನೀಡಿದೆ.
‘ಅಭ್ಯರ್ಥಿಗಳ ಆಯ್ಕೆಗೆ ಸಮಿತಿ ರಚಿಸಲಾಗಿದೆ. ನಾನೂ ಸಹ ಸ್ಪರ್ಧಿಸಲಿದ್ದೇನೆ. ನಮ್ಮ ಪಕ್ಷದ ಪ್ರಚಾರವು ರಾಜ್ಯದ ಅಭಿವೃದ್ಧಿಗೆ ಕೇಂದ್ರೀಕೃತವಾಗಿರುತ್ತದೆ’ ಎಂದು ಅವರು ಪಕ್ಷದ ಕೇಂದ್ರ ಕಚೇರಿಯಲ್ಲಿ ಮಾಧ್ಯಮದವರಿಗೆ ತಿಳಿಸಿದರು.
‘ಮೈತ್ರಿಕೂಟದ ನೇತೃತ್ವ ವಹಿಸುವುದು ಅಥವಾ ಮತ್ತೊಬ್ಬರ ನೇತೃತ್ವದ ಮೈತ್ರಿಕೂಟದಲ್ಲಿ ಸೇರುವ ಬಗ್ಗೆ ಈಗಲೇ ಏನನ್ನೂ ಹೇಳುವುದಿಲ್ಲ. ನಮ್ಮೊಂದಿಗೆ ಮಾತುಕತೆ ನಡೆಸುವ ಪಕ್ಷಗಳ ಮೇಲೆ ಅದು ಅವಲಂಬಿತವಾಗಿರುತ್ತದೆ’ ಎಂದು ಹೇಳಿದರು.
‘ಬಿಜೆಪಿ ಜತೆ ಮೈತ್ರಿ ಇಲ್ಲ’
‘ಚುಣಾವಣೆ ಸಂದರ್ಭದಲ್ಲಿ ಮೈತ್ರಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ತಮಿಳುನಾಡಿನ ಡಿಎನ್ಎ ಬದಲು ಮಾಡಲು ಮುಂದಾಗಿರುವ ಬಿಜೆಪಿ ಜೊತೆಗೆ ಮಾತ್ರ ಮೈತ್ರಿ ಇಲ್ಲ’ ಎಂಬುದನ್ನು ಕಮಲ್ ಹಾಸನ್ ಸ್ಪಷ್ಟಪಡಿಸಿದರು.
ಕಮಲ್ ಹಾಸನ್ ಪಕ್ಷದ ನೋಂದಣಿಗೆ ದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಇದರಿಂದ ಅವರು ಕಾಂಗ್ರೆಸ್ ಜೊತೆಗೆ ಕೈಜೋಡಿಸಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.